ಒಕ್ಕಲಿಗ ಸಮುದಾಯವನ್ನು ಸಂಸ್ಕೃತಿ ಹೀನರು ಎಂದು ಹೇಳಿಕೆ ನೀಡಿರುವ ಪ್ರೊ.ಕೆ.ಎಸ್ ಭಗವಾನ್ ವಿರುದ್ಧ ಒಕ್ಕಲಿಗರು ಮಂಡ್ಯದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ರೈತ ಸಭಾಂಗಣದ ಆವರಣದ ರಾಷ್ಟ್ರಕವಿ ಕುವೆಂಪು ಪುತ್ಥಳಿ ಎದುರು ಅಖಂಡ ಕರ್ನಾಟಕ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪ್ರತಿಭಟಿಸಿ ಭಗವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕಲಿಗರು ನೆಲದ ಸಂಸ್ಕೃತಿಯ ಪ್ರತೀಕ, ಭೂಮಿ ನಂಬಿ ಬದುಕು ಮಾಡುತ್ತಿದ್ದು. ಸುಸಂಸ್ಕೃತ ಬದುಕು ನಡೆಸುತ್ತಿದ್ದಾರೆ, ಆದರೆ ಭಗವಾನ್ ಅವರು ಒಕ್ಕಲಿಗ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಜಾತಿ ಜಾತಿಗಳ ನಡುವೆ ಸಂಘರ್ಷವನ್ನುಂಟು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಕಿಡಿಕಾರಿದರು. ಸಮುದಾಯದ ವಿರುದ್ಧ ಆಡಿರುವ ಅವಹೇಳನ ಮಾತನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್, ಸಂಘದ ಅಧ್ಯಕ್ಷ ಕೆ ಸಿ ರವೀಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಟಿ.ವಿ ಕೃಷ್ಣ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ರಮೇಶ್ ಭಾಗವಹಿಸಿದ್ದರು.