ಗುಜರಾತ್ನ ಹಳ್ಳಿಯೊಂದರಲ್ಲಿಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಐವರನ್ನು ಥಳಿಸಿದ್ದ ನಾಲ್ವರು ಪೊಲೀಸರಿಗೆ ಗುಜರಾತ್ ಹೈಕೋರ್ಟ್ ಜೈಲುಶಿಕ್ಷೆ ವಿಧಿಸಿದೆ. 14 ದಿನಗಳ ಕಾಲ ಸರಳ ಜೈಲುಶಿಕ್ಷೆ ವಿಧಿಸಿ ಆದೇಶಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಖೇಡಾ ಜಿಲ್ಲೆಯಲ್ಲಿ ಘಟನೆ ನಡೆದಿತ್ತು. ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನವರಾತ್ರಿ ಆಚರಣೆಯ ವೇಳೆ ಜನಸಮೂಹದ ಮೇಲೆ ಕಲ್ಲು ಎಸೆದ ಆರೋಪ ಕೇಳಿಬಂದಿತ್ತು. ಆ ವೇಳೆ, ಕಲ್ಲು ಎಸೆದಿದ್ದಾರೆಂಬ ಆರೋಪದ ಮೇಲೆ ಐವರನ್ನು ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದರು.
ಖೇಡಾದ ಮಟರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎ ವಿ ಪರ್ಮಾರ್, ಪಿಎಸ್ಐ ಡಿ ಬಿ ಕುಮಾವತ್, ಹೆಡ್ ಕಾನ್ಸ್ಟೆಬಲ್ ಕೆ.ಎಲ್ ದಾಭಿ ಮತ್ತು ಕಾನ್ಸ್ಟೆಬಲ್ ರಾಜು ದಾಭಿ ಅವರು ಶಿಕ್ಷೆಗೆ ಗುರಿಯಾಗಿರುವ ಅಪಾದಿತ ಪೊಲೀಸರು. ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ನ್ಯಾಯಾಲಯವು 90 ದಿನಗಳ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್ ಸುಹಿಯಾ ಮತ್ತು ಗೀತಾ ಗೋಪು ಅವರಿದ್ದ ಪೀಠವು, “ದೂರುದಾರರ ವಿರುದ್ಧ ಪೊಲೀಸ್ ಅಧಿಕಾರಿಗಳ ಕ್ರಮವು ಮಾನವೀಯತೆ ವಿರುದ್ಧದ ಅಪರಾಧವಾಗಿದೆ. ದೂರುದಾರರನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿರುವುದನ್ನು ಇಡೀ ಜನಸಮೂಹವೇ ಕಣ್ಣಾರೆ ಕಂಡಿದೆ. ಅಲ್ಲದೆ, ಘಟನೆಯು ಉಂಡೇಲ ಗ್ರಾಮಕ್ಕೆ ಸೀಮಿತವಾಗಿರದೆ ಗ್ರಾಮದ ಆಚೆಗೂ ವ್ಯಾಪಿಸಿದೆ ಎಂಬುದು ಗಮನಾರ್ಹ” ಎಂದು ಹೇಳಿದೆ.
“ಸರ್ಕಾರಿ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸಿದರೆ, ಅದು ಕಾನೂನಿನ ತಿರಸ್ಕಾರವನ್ನು ಸೂಚಿಸುತ್ತದೆ. ಕಾನೂನುಬಾಹಿರತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನಗೆ ತಾನೇ ಕಾನೂನಾಗುವ ಪ್ರಚೋದನೆ ನೀಡುತ್ತದೆ. ಇದು ಅರಾಜಕತೆಗೆ ಕಾರಣವಾಗುತ್ತದೆ. ಯಾವುದೇ ಸುಸಂಸ್ಕೃತ ರಾಷ್ಟ್ರವು ಅಂತಹ ಘಟನೆಯನ್ನು ಅನುಮತಿಸುವುದಿಲ್ಲ”ಎಂದು ಹೈಕೋರ್ಟ್ ಹೇಳಿದೆ.