ಮಂಡ್ಯನಗರದ ಪಿ ಇ ಎಸ್ ಕಾಲೇಜಿನ ಆವರಣದಲ್ಲಿ ಫಸ್ಟ್ ಸರ್ಕಲ್ ಸಂಸ್ಥೆಯಿಂದ ಅಕ್ಟೋಬರ್ 27ರಂದು ಉದ್ಯೋಗ ಮೇಳ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ನಾಗರಾಜ ಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವಾರು ಉದ್ಯಮಿಗಳು ಸೇರಿ ಫಸ್ಟ್ ಸರ್ಕಲ್ ಸಂಸ್ಥೆಯನ್ನು ಕಟ್ಟಿಕೊಂಡಿದ್ದೇವೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವಕಾಶ ಕಲ್ಪಿಸುವುದು ಹಾಗೂ ಹೊಸದಾಗಿ ಉದ್ಯಮ ಸ್ಥಾಪಿಸುವವರಿಗೆ ಉತ್ತೇಜನ ನೀಡುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ, ಈ ನೆಲೆಯಲ್ಲಿ ಮಂಡ್ಯದ ಪಿ ಎಸ್ ಕಾಲೇಜಿನಲ್ಲಿ ಅಕ್ಟೋಬರ್ 27ರಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗವಕಾಶ ಪಡೆಯುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಫಸ್ಟ್ ಸರ್ಕಲ್ ಸಂಸ್ಥೆಯನ್ನು ಸಮಾಜದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ವ್ಯಾಪಾರೋದ್ಯಮಿ ಗಳಲ್ಲಿ ಮಾರ್ಕೆಟಿಂಗ್, ಪೂರೈಕೆದಾರರ ಗುರುತಿಸುವಿಕೆ, ನೇಮಕಾತಿ ಮತ್ತು ಸಂಪನ್ಮೂಲಗಳ ಪರಸ್ಪರ ಹಂಚಿಕೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ. ಇದು ಉದ್ಯಮಿಗಳಿಗೆ ಉದ್ಯಮಶೀಲತೆ ಮತ್ತು ವ್ಯಾಪಾರದಲ್ಲಿ ಸಹೋದರತ್ವವನ್ನು ಸೃಷ್ಟಿಸುವ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಲಿದೆ ಎಂದರು.
ಸರ್ಕಲ್ ಫಸ್ಟ್ ಸಂಸ್ಥೆಯು ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ, ನಗರಗಳಲ್ಲಿ ಉದ್ಯೋಗ ಮೇಳವನ್ನು ನಡೆಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮದ ಏಕೈಕ ಉದ್ದೇಶವೆಂದರೆ ನುರಿತ ಗ್ರಾಮೀಣ ಉದ್ಯೋಗ ಆಕಾಂಕ್ಷಿಗಳಿಗೆ ಉನ್ನತ ಅವಕಾಶವನ್ನು ಒದಗಿಸುವುದು, ಫಸ್ಟ್ ಸರ್ಕಲ್ ಸಂಸ್ಥೆಯು ಉದ್ಯೋಗ ಮೇಳವನ್ನು 40 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳ ಸಹಯೋಗದೊಂದಿಗೆ ಆಯೋಚಿಸುತ್ತಿದ್ದು, ಸುಮಾರು 4000 ಉದ್ಯೋಗಾಕಾಂಕ್ಷಿಗಳ ಭಾಗವಹಿಸಬಹುದು ಎಂದರು.
ಫಸ್ಟ್ ಸರ್ಕಲ್ ಸಂಸ್ಥೆಯು ಡಿಸೆಂಬರ್1, 2 ಮತ್ತು 3 ರಂದು ಮೂರು ದಿನಗಳ ಕಾಲ ಜಾಬ್ ಎಕ್ಸಪೋವನ್ನು ಟೆನಿಸ್, ಪೆವಿಲಿಯನ್ ಆರಮನೆ ಮೈದಾನ ಬೆಂಗಳೂರಿನಲ್ಲಿ ಅಂತಿಮ ಉದ್ಯೋಗ ಮೇಳದ ಅಂಗವಾಗಿ 120 ಕಂಪನಿಗಳ ಭಾಗವಹಿಸುವಿಕೆಯೊಂದಿಗೆ ನಡೆಸಲು ತೀರ್ಮಾನಿಸಿದೆ. ಈ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಉದ್ಯೋಗ ಮೇಳದಲ್ಲಿ ನೋಂದಾವಣೆ ಮಾಡಿಕೊಳ್ಳಲು ಯಾವುದೇ ಶುಲ್ಕವಿಲ್ಲ, ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದೇವೆ. ಎಸ್ ಎಸ್ ಎಲ್ ಸಿ ಯಿಂದ ಪದವಿ ಪಡೆದ ಎಲ್ಲಾ ರೀತಿಯ ಪದವಿ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದು.18 ರಿಂದ 45 ವಯಸ್ಸಿನವರು ಭಾಗವಹಿಸಬಹುದು ಎಂದರು
ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ಬೆಂಗಳೂರಿನಲ್ಲಿ ಹಲವು ಉದ್ಯಮಿಗಳೆಲ್ಲ ಸೇರಿ ಐಎಎಸ್ ಅಧಿಕಾರಿ ಜಯರಾಮ್ ರಾಯಪುರ ಅವರ ಮಾರ್ಗದರ್ಶನದಲ್ಲಿ ಫಸ್ಟ್ ಸರ್ಕಲ್ ಸಂಸ್ಥೆ ಸ್ಥಾಪಿಸಿದ್ದು, ಹೊಸದಾಗಿ ಉದ್ಯಮ ಸ್ಥಾಪಿಸಲು ಬರುವವರಿಗೆ ಮಾರ್ಗದರ್ಶನ ಹಾಗೂ ಗ್ರಾಮೀಣ ಭಾಗದ ವಿದ್ಯಾವಂತ ಯುವಕ- ಯುವತಿಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶ ಹೊಂದಿದೆ. ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ವಿದ್ಯಾವಂತ ವಿದ್ಯಾರ್ಥಿಗಳು ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ಉದ್ಯಮಿಗಳಾದ ಅಂಬರೀಶ್, ಚಂದ್ರಶೇಖರ್, ಹರೀಶ್, ಪ್ರಾಂಶುಪಾಲರಾದ ಶಿವಲಿಂಗೇಗೌಡ ಉಪಸ್ಥಿತರಿದ್ದರು.