ಮಹರ್ಷಿ ವಾಲ್ಮೀಕಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಇಂತಹ ದಾರ್ಶನಿಕರು ಎಲ್ಲಾ ವರ್ಗದ ಆಸ್ತಿಯಾಗಿದ್ದಾರೆ. ಇಡೀ ಮನುಕುಲವು ಹೇಗೆ ಬದುಕಬೇಕು ಎಂಬುದನ್ನು ತಾವು ಬರೆದ ರಾಮಾಯಣ ಕೃತಿಯಲ್ಲಿ ಅಡಗಿಸಿದ್ದಾರೆ. ಹಾಗಾಗಿ ಭಾರತ ದೇಶದ ಆದಿ ಕವಿ ಎಂದು ವಾಲ್ಮೀಕಿ ಅವರನ್ನು ಕರೆಯಲಾಗಿದೆ ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ನಾಯಕರ ಸಂಘದ ವತಿಯಿಂದ ಕೆ.ಆರ್.ಪೇಟೆ ಪಟ್ಟಣದ ಶತಮಾನದ ಶಾಲೆಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಆದರೂ ಇಂದಿಗೂ ಸಹ ವಾಲ್ಮೀಕಿ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ಇಂತಹ ಮಹನೀಯಯ ಜಯಂತಿಯ ಆಚರಣೆಗೆ ಯಾವುದೇ ಗುಂಪು ಸೃಷ್ಠಿಸಿಕೊಳ್ಳಬಾರದು. ವಾಲ್ಮೀಕಿ ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಣೆ ಮಾಡುವ ಮೂಲಕ ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕರಾದ ಡಾ.ಎಂ.ಪುಷ್ಪ ಅವತು ವಾಲ್ಮೀಕಿ ಕುರಿತು ಪ್ರಧಾನ ಭಾಷಣ ಮಾಡಿ, ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿ ವಾಲ್ಮೀಕಿ. ಮೇರು ಕೃತಿ ರಾಮಾಯಣ ಬರೆದ ಕೀರ್ತಿ ಬೇಡನಾಗಿದ್ದ ವಾಲ್ಮೀಕಿ ಮಹರ್ಷಿಗೆ ಸಲ್ಲುತ್ತದೆ. ರಾಮಾಯಣ ಮತ್ತು ಮಹಾಭಾರತ ಭಾರತದ ಸಂಸ್ಕೃತಿ-ಪರಂಪರೆಯನ್ನು ಪ್ರತಿಬಿಂಬಿಸುವ ಸಾರ್ವಕಾಲಿಕ ಮೌಲ್ಯಾಧಾರಿತ ಕಾವ್ಯಗಳಾಗಿವೆ. ಜನರ ದಿನನಿತ್ಯದ ಘಟನೆಗಳು ತಿಳಿಸುತ್ತವೆ. ರಾಮಾಯಣದ ಪಾತ್ರ ಮತ್ತು ಸನ್ನಿವೇಶಗಳು ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಸುತ್ತವೆ ಎಂದರು.
ತಾಲ್ಲೂಕು ನಾಯಕರ ಸಂಘದ ಅಧ್ಯಕ್ಷ ನರಸನಾಯಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಹಸೀಲ್ದಾರ್ ನಿಸರ್ಗಪ್ರಿಯ, ಪುರಸಭೆಯ ಅಧ್ಯಕ್ಷ ಎನ್.ನಟರಾಜ್, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ನರಸನಾಯಕ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್, ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಕಾರ್ಯಕ್ರಮ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಜಾನಕೀರಾಂ, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಸತೀಶ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ಪುರಸಭೆಯ ಮುಖ್ಯಾಧಿಕಾರಿ ಜಗನ್ ರೆಡ್ಡಿ, ಪಶುವೈದ್ಯ ಇಲಾಖೆಯು ಸಹಾಯಕ ನಿರ್ದೇಶಕ ಡಾ.ದೇವರಾಜ್, ತಾಲ್ಲೂಕು ಬಿಸಿಎಂ ಅಧಿಕಾರಿ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.