ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ, ಒಬ್ಬ ಶಾಸಕನೂ ನಮ್ಮ ಪಾರ್ಟಿ ಬಿಡಲ್ಲ, ಬಿಜೆಪಿಯವರು ಸರ್ಕಾರ ಬೀಳಿಸುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮಂಡ್ಯ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಬಂದು 4 ತಿಂಗಳಾಗಿದೆ. ಮೊದಲು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಹೇಳಿ. ಸಿಡಿ ತನಿಖೆಗೆ ಆಗ್ರಹಿಸಿ ಸಿಎಂಗೆ ರಮೇಶ್ ಜಾರಕಿಹೊಳಿ ಪತ್ರ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹೇಳಿದ ತಕ್ಷಣ ಮಾಡಲು ಆಗಲ್ಲ. ಅವರ ಪತ್ರ ಬಂದರೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ತ್ರೀ ಪೇಸ್ ವಿದ್ಯುತ್ ಒದಗಿಸಲು ಹೇಳಿದ್ದೇನೆ
ಮಂಡ್ಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಬರಗಾಲ, ಕುಡಿಯುವ ನೀರು, ವಿದ್ಯುತ್, ಆಸ್ಪತ್ರೆ ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಕುಡಿಯುವ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಲು ಸೂಚಿಸಿದ್ದೇನೆ. ಒಂದು ವೇಳೆ ಸಮಸ್ಯೆ ಬಂದರೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದು. 3 ಶಿಫ್ಟ್ಗಳಲ್ಲಿ ತ್ರೀ ಪೇಸ್ ಕರೆಂಟ್ 5 ಗಂಟೆ ನೀಡಲು ಸೂಚನೆ ನೀಡಬೇಕು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಆಗದಂತೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆ ಆರಂಭಕ್ಕೆ ಕ್ರಮ ವಹಿಸುವುದ ಜತೆಗೆ ನಗರದ ವಾಟರ್ ಬಿಲ್ ಕಡಿಮೆ ಮಾಡಲು ತಿಳಿಸಲಾಗಿದೆ. ಅಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿ ಕೆಳಸೇತುವೆ ಕಾಮಗಾರಿ ಪೂರ್ಣ ಮಾಡಲು ಸೂಚಿಸಲಾಗಿದೆ ಎಂದ ಅವರು, ಕುಡಿಯುವ ನೀರಿಗೆ ಉಳಿಸಿಕೊಂಡು ಬೆಳೆ ರಕ್ಷಣೆ ಮಾಡಲು ಹೇಳಿದ್ದೇನೆ. ಕೆಲವು ಇಲಾಖೆಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಾವಣೆ ಆಗದಿದ್ದರೆ ಕಠಿಣ ಕ್ರಮ. ಮಂಡ್ಯಕ್ಕೆ ಪ್ರಗತಿ ಪರಿಶೀಲನೆ ಮಾಡಲು ಬರಲಾಗಿದೆ. ಸ್ಪೆಷಲ್ ಪ್ಯಾಕೇಜ್ ಘೋಷಣೆ ಮಾಡಲು ಅಲ್ಲ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಎಂಟ್ರಿ, ಎಕ್ಸಿಟ್ ಕ್ಲೋಸ್ಗೆ ಸಂಬಂಧಿಸಿದಂತೆ ಅಗತ್ಯ ಇರುವ ಕಡೆ ಎಂಟ್ರಿ, ಎಕ್ಸಿಟ್ ಕೊಡಲು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.