ಮೈಸೂರಿನಲ್ಲಿ ಬೀಗರ ಊಟ ಮುಗಿಸಿಕೊಂಡು ಹೊರಟವರು ಮನೆಗೆ ಬರದೇ ಮಸಣ ಸೇರಿದರು..ನಮ್ಮ ಕುಟುಂಬದಲ್ಲಿ ಇಂತಹ ದುರಂತ ನಡೆಯುತ್ತದೆ ಎಂದು ಕನಸ್ಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಜಲ ಸಮಾಧಿಯಾದ ಕೃಷ್ಣಪ್ಪ ಅವರ ಪುತ್ರ ಕಣ್ಣೀರು ಹಾಕಿದರು.
ಪಾಂಡವಪುರ ತಾಲ್ಲೂಕಿನ ಬನ್ನಘಟ್ಟದ ವಿ.ಸಿ.ನಾಲೆಗೆ ನಿನ್ನೆ ಕಾರು ಉರುಳಿ ಬಿದ್ದು, ಐವರು ಜೀವಂತ ಜಲ ಸಮಾಧಿಯಾಗಿದ್ದರು. ಇಂದು ಪಾಂಡವಪುರ ಆಸ್ಪತ್ರೆಯಿಂದ ಜಲಸಮಾಧಿಯಾದ ಐವರ ಮೃತ ದೇಹಗಳನ್ನು ಪಡೆಯಲು ಬಂದ ಅವರ ಕುಟುಂಬದವರ ಗೋಳು ಮುಗಿಲು ಮುಟ್ಟುವಂತಿತ್ತು.
ಬೀಗರ ಊಟ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದ್ರು, ಊಟ ಮುಗಿಸಿ ವಾಪಾಸ್ ಬರುವಾಗ ದುರ್ಘಟನೆ ನಡೆದಿದೆ. ಮಾಧ್ಯಮಗಳು ಹಾಗೂ ಪೊಲೀಸರಿಂದ ನಿನ್ನೆ ರಾತ್ರಿ ಮಾಹಿತಿ ತಿಳಿಯಿತು ಎಂದು ತಿಳಿಸಿದ ಕೃಷ್ಣಪ್ಪ ಅವರು ಪುತ್ರ, ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ವಿ.ಸಿ.ನಾಲೆ ಬಳಿಯ ತಿರುವಿನಲ್ಲಿ ಯಾವುದೇ ಸೂಚನಾ ಫಲಕ ಹಾಗೂ ತಡೆಗೋಡೆ ಅಳವಡಿಸಿಲ್ಲ, ಇದರಿಂದ ತಮ್ಮ ತಂದೆ ಸೇರಿದಂತೆ ಐವರ ಸಾವು ಸಂಭವಿಸಿದೆ ಎಂದು ದೂರಿದರು.
ನಮಗಾದ ನೋವು ಇನ್ಯಾರಿಗೂ ಆಗಬಾರದು
ನಮ್ಮ ತಂದೆ ಇಡೀ ಕುಟುಂಬದ ಜವಬ್ದಾರಿ ಹೊತ್ತಿದ್ರು, ತಂದೆ ಕಳೆದುಕೊಂಡು ಸಾಕಷ್ಟು ನೋವಲ್ಲಿದ್ದೇವೆ,
ನಮಗಾದ ನೋವು ಇನ್ಯಾರಿಗೂ ಆಗಬಾರದು, ಇನ್ಮುಂದೆಯಾದ್ರು ಅಪಘಾತ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
5 ಲಕ್ಷ ಪರಿಹಾರಕ್ಕೆ ಒತ್ತಾಯ
5 ಲಕ್ಷ ಪರಿಹಾರ ಘೋಷಿಸಿರುವ ವರೆಗು ಶವ ತೆಗೆಯಲ್ಲ ಎಂದು ಮೃತಪಟ್ಟ ಐವರ ಕುಟುಂಬದವರು ಪಟ್ಟು ಹಿಡಿದರು. ಪಾಂಡವಪುರ ತಾಲೂಕು ಆಡಳಿತವು ತಲಾ ₹ 2 ಲಕ್ಷ ಪರಿಹಾರ ಘೋಷಣೆ ಮಾಡಿತ್ತು, ಇದರಿಂದ ತೃಪ್ತರಾಗದ ಅವರು, 2 ಲಕ್ಷ ಪರಿಹಾರ ಎಲ್ಲಿ ಸಾಕಾಗುತ್ತೆ, ತಲಾ 5 ಲಕ್ಷ ಪರಿಹಾರ ನೀಡುವವರೆಗೂ ಶವಗಳನ್ನು ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮೃತದೇಹ ತೆಗೆದುಕೊಂಡು ಮೊದಲು ಅಂತ್ಯ ಸಂಸ್ಕಾರ ನಡೆಸುವಂತೆ ಶಾಸಕರ ಬೆಂಬಲಿಗರು ಹಾಗೂ ಅಧಿಕಾರಿಗಳು ಮನವಿ ಮಾಡಿದರಾದರೂ, ಅಧಿಕಾರಿಗಳ ಮಾತಿಗೆ ಕ್ಯಾರೆ ಎನ್ನದ ಮೃತರ ಕುಟುಂಬಸ್ಥರು, ಮಣ್ಣು ಮಾಡಿದ್ನೇಲೆ ಇನ್ನೇಲ್ಲಿ ಕೊಡ್ತೀರಾ ? ಎಲ್ಲರೂ ಕೂಲಿ ಮಾಡಿ ಜೀವನ ಮಾಡ್ತಿದ್ರು, ಸರ್ಕಾರದ ವೈಫಲ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತದೇಹಗಳ ಹಸ್ತಾಂತರ
ಐವರು ಮೃತರ ಮರಣೋತ್ತರ ಪರೀಕ್ಷೆ ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿ,
ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು.
ಕೈದಾಳದಲ್ಲಿ ಅಂತ್ಯಕ್ರಿಯೆ
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೈದಾಳ ಗ್ರಾಮದಲ್ಲಿ ಈ ಮೃತದೇಹಗಳ ಅಂತ್ಯಕ್ರಿಯೆ ನಡೆಯಲಿದೆ. ಆಂಬುಲೆನ್ಸ್ ಮೂಲಕ ಐದು ಮೃತದೇಹಗಳನ್ನು ರವಾನಿಸಲಾಯಿತು.
ತಡೆಗೋಡೆ ನಿರ್ಮಾಣಕ್ಕೆ ಶಾಸಕರ ಸೂಚನೆ
ದುರಂತ ನಡೆದ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ,
ತಕ್ಷಣವೇ ತಡೆಗೋಡೆ ನಿರ್ಮಾಣ ಮಾಡಿ, ಕಾಂಕ್ರೀಟ್ ಗೋಡೆ ಹಾಗೂ ಕ್ರಾಸ್ ಬ್ಯಾರಿಯರ್ ಹಾಕುವಂತೆ ಸೂಚಿಸಿದರು. ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು.
ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಿಳಿಸಿದರು.