ಮನುಷ್ಯ ಜೀವನದ ಆರೋಗ್ಯ ವೃದ್ಧಿಯಾಗಲು ಧನ್ವಂತರಿ ಸ್ಮರಣೆ ಅಗತ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಹಾಘೂ ಶ್ರೀಲಕ್ಮೀ ಜನಾರ್ಧನ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಗಾಂಧಿಭವನದಲ್ಲಿ ನಡೆದ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹರ್ಷಿ ಧನ್ವಂತರಿ ಅವರು ಕ್ರಿ. ಪೂರ್ವ ದಲ್ಲಿಯೇ ಆರೋಗ್ಯದ ಬಗ್ಗೆ ಸಂಶೋಧನೆ ನಡೆಸಿ ಆಯುರ್ವೇದ ವಿಜ್ಞಾನದ ಬಗ್ಗೆ ತಿಳಿಸಿ ಹೋಗಿದ್ದಾರೆ. ಪ್ರಕೃತಿಯನ್ನೇ ಅವಲಂಬಿಸಿ ಪ್ರಕೃತಿಯಲ್ಲಿರುವ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಔಷಧ ತಯಾರಿಕೆ ಮಾಡಿ ಜಗತ್ತಿನ ಆಯುರ್ವೇದಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರು.
ಪ್ರಕೃತಿಯ ಮಡಿಲಲ್ಲಿ ಆಯುರ್ವೇದ ಔಷಧಿ ಮಾಡುವ ತಜ್ಞರಿಗೆ ಹಿಂದೆ ರಾಜಾಶ್ರಯ ಸಿಗುತ್ತಿತ್ತು. ಆಗಾಗಿಯೆ ಗಣಿತಶಾಸ್ತ್ರ, ಯೋಗಶಾಸ್ರ್ತದ ಬಗ್ಗೆ ಭಾರತ ದೇಶದಲ್ಲಿ ಪ್ರಾಚೀನ ಕಾಲದಲ್ಲೇ ಸಂಶೋಧನೆಗಳು ನಡೆದಿವೆ. ಆರ್ಯಭಟ, ವರಹಮಿರ್, ಯಾಜ್ಞವಲ್ಕ್ಯ , ದನ್ವಂತರಿ ಸೇರಿದಂತೆ ಹಲವಾರು ತತ್ವಜ್ಞಾನಿಗಳು ಮಾಡಿ ಹೋಗಿರುವ ಸಂಶೋಧನೆಯನ್ನೇ ನಾವು ಇತ್ತೀಚಿಗೆ ಹೊಸ ತಂತ್ರ ಉಪಯೋಗಿಸಿ ಹೊಸ ರೂಪ ಕೊಟ್ಟಿದ್ದೇವೆ ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಹುಟ್ಟಿನಿಂದ ಸಾವಿನ ನಡುವೆ ಇರುವ ಜೀವನದಲ್ಲಿ ಸಾಧನೆ ಅವಶ್ಯಕ. ಮಹಾನ್ ವ್ಯಕ್ತಿಗಳು ನೋವಿನಲ್ಲಿ ಸಂತಸವಿದೆ. ನೋವನ್ನು ಗೆದ್ದಾಗ ಜೀವನದ ಯಾವುದೇ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ನಗರಸಭಾ ಸದಸ್ಯ ಅರುಣ್ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮಿ , ಡಾ.ಎ ಎಸ್ ಚಂದ್ರಶೇಖರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.