ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ನೇಮಕವಾಗಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಸಿಹಿ ವಿತರಿಸಿ, ಸಂಭ್ರಮಿಸಿದರು.
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಕಾರ್ಯಕರ್ತರೆಲ್ಲ ಒಗ್ಗೂಡಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡ ಶಿವಕುಮಾರ ಆರಾಧ್ಯ ಮಾತನಾಡಿ, ಯುವ ನಾಯಕ ವಿಜಯೇಂದ್ರ ಅವರಿಗೆ ಆದ್ಯತೆ ನೀಡಿರುವುದು ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬಲಿದೆ. ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ವಿಪಕ್ಷ ನಾಯಕ ಸ್ಥಾನ ನೀಡಲು ಒತ್ತಾಯ
ಮುಂದಿನ ದಿನಗಳಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್ನಾಯರಾಯಣ ಅವರನ್ನು ವಿರೋಧ ಪಕ್ಷದ ನಾಯಕನ್ನನಾಗಿ ನೇಮಕ ಮಾಡಿದರೆ, ಜೋಡೆತ್ತುಗಳು ರಾಜ್ಯ ಪ್ರವಾಸ ಮಾಡಿ, ಲೋಕಸಭಾ ಚುನಾವಣೆ, ಜಿ.ಪಂ., ತಾ, ಪಂ. ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿಗೆ ಹೊಸ ಅಲೆಯನ್ನೇ ಎಬ್ಬಿಸಲಿದ್ದಾರೆ ಎಂದು ಮುಖಂಡ ಅರವಿಂದ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುಟ್ಟಮ್ಮ, ತಾಯಮ್ಮ, ಸಿದ್ದರಾಜು, ಎಂ.ಬಿ.ರಮೇಶ್, ಮಹೇಶ್, ಪ್ರಸನ್ನ, ಹರ್ಷ ಮತ್ತಿತರರಿದ್ದರು.