ಉತ್ತರಖಂಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗವೊಂದು ಕುಸಿದಿದ್ದು, ಅವಶೇಷಗಳಡಿಯಲ್ಲಿ ಕನಿಷ್ಠ 40 ಕಾರ್ಮಿಕರು ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಆದಿತ್ಯವಾರ ಮುಂಜಾನೆ ಉತ್ತರಕಾಶಿಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ನಾಲ್ಕೂವರೆ ಕಿಲೋಮೀಟರ್ ಉದ್ದದ ಸುರಂಗದಲ್ಲಿ 150 ಮೀಟರ್ ಉದ್ದದಷ್ಟು ಕುಸಿದಿದೆ. ಘಟನೆಯಲ್ಲಿ 40 ಕಾರ್ಮಿಕರು ಸುರಂಗದಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸುರಂಗದಡಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಪ್ರಯತ್ನ ನಡೆಯುತ್ತಿದೆ.
ರಕ್ಷಣಾ ತಂಡಗಳು, ಜಿಲ್ಲಾಡಳಿತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈವೆರೆಗೆ ಪ್ರಾಣಹಾನಿಯ ಬಗ್ಗೆ ಸ್ಪಷ್ಟವಾದಂತಹ ಮಾಹಿತಿ ಲಭ್ಯವಾಗಿಲ್ಲ. ಸುರಂಗದ ಒಳಗೆ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನು ಮಾಡಲಾಗಿದೆ.
ರಕ್ಷಣಾ ಕಾರ್ಯಚರಣೆಯ ವಿಡಿಯೋಗಳು ಸುರಂಗದೊಳಗೆ ಅಧಿಕಾರಿಗಳು ಕಾರ್ಯಾಚರಣೆ ಮಾಡುವುದನ್ನು ತೋರಿಸುತ್ತಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು, ಅಗ್ನಿ ಶಾಮಕದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾಹಿತಿಯ ಪ್ರಕಾರ ಸುರಂಗದಡಿಯಲ್ಲಿ 36 ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಉತ್ತರಕಾಶಿ ಎಸ್ಪಿ ಅರ್ಪಣ್ ಯದುವಂಶಿ ಈ ಕುರಿತು ಮಾಹಿತಿಯನ್ನು ನೀಡಿದ್ದು, ಇದುವೆರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸುರಂಗವು ಚಾರ್ ಧಾಮ್ ರಸ್ತೆ ಯೋಜನೆಯ ಭಾಗವಾಗಿದೆ. ಇದರ ನಿರ್ಮಾಣದಿಂದ ಉತ್ತರಕಾಶಿ ಮತ್ತು ಯಮುನೋತ್ರಿ ನಡುವಿನ ಪ್ರಯಾಣವು 26 ಕಿ.ಮೀಗಳಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.