ಪ್ರಸ್ತುತ ದಿನಗಳಲ್ಲಿನ ಬದಲಾದ ಜೀವನಶೈಲಿ ಮತ್ತು ಆಹಾರಪದ್ದತಿಯಿಂದ ಮಧುಮೇಹಿಗಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ, ಸಕ್ಕರೆ ನಾಡು ಲಯನ್ಸ್ ಸಂಸ್ಥೆ, ಮಾಂಡವ್ಯ ಲಯನ್ ಸಂಸ್ಥೆ, ಹಾಗೂ ಸ್ಪಂದನ ಆಸ್ಪತ್ರೆ ಸಹಯೋಗದೊಂದಿಗೆ “ವಿಶ್ವ ಮಧುಮೇಹ ದಿನ” ಪ್ರಯುಕ್ತ ಉಚಿತ ರಕ್ತ ಪರೀಕ್ಷೆ, ಇಸಿಜಿ, ಬಿಪಿ ತಪಾಸಣೆ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಳವಾಗುತ್ತಿದೆ, ಸದ್ದಿಲ್ಲದ ಕೊಲೆಗಾರ ಎಂದರೂ ತಪ್ಪಾಗಲ್ಲ ಎಂದು ನುಡಿದರು.
ಸಕ್ಕರೆ ಕಾಯಿಲೆ ನಿಯಂತ್ರಣಕ್ಕಾಗಿ ಇನ್ಸುಲಿನ್ ಕಂಡುಹಿಡಿದ ವಿಜ್ಞಾನಿ ಸರ್ ಫ್ರೆಡಿಕ್ ಬ್ಯಾಂಟಿಂಗ್ ಅವರ ಜನ್ಮ ದಿನವಾಗಿದ್ದು, ಇವರ ನೆನಪಿಗಾಗಿ ವಿಶ್ವ ಮಧುಮೇಹ ದಿನವನ್ನು 1991 ರಿಂದ ಪ್ರಪಂಚದಾದ್ಯಂತ ಆಚರಿಸಲು ವಿಶ್ವಸಂಸ್ಥೆ ಘೋಷಿಸಿತು ಎಂದು ತಿಳಿಸಿದರು.
ಸ್ಪಂದನ ಆಸ್ಪತ್ರೆಯ ವೈದ್ಯ ಡಾ. ಆದಿತ್ಯ, ಮನುಷ್ಯರ ರಕ್ತದಲ್ಲಿ ಸಕ್ಕರೆ ಪ್ರಮಾಣದ ಏರಿಕೆ ಕಾಣುವುದಲ್ಲೇ ಸಕ್ಕರೆಕಾಯಿಲೆ ಎನ್ನುವುದು, ಪೂರ್ವಿಕರ ಆಹಾರ ಪದ್ದತಿ ಮತ್ತು ಜೀವನಪದ್ದತಿಯನ್ನೇ ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದರು.
ನಾವು ತಿಂದತಹ ಎಲ್ಲಾ ಪದಾರ್ಥಗಳು ಸಕ್ಕರೆಯ ಅಂಶವಾಗಿಯೇ ರಕ್ತಕ್ಕೆ ಸೇರುತ್ತದೆ, ದೇಹಕ್ಕೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಂಡು ದೇಹದ ವಿವಿಧ ಭಾಗಗಲ್ಲಿ ಸೇಖರಿಸಿಟ್ಟಿಕೊಂಡಿರುತ್ತದೆ, ಮಧುಮೇಹಿಗಳು ಸಮಪ್ರಮಾದಲ್ಲಿ ಸೊಪ್ಪು, ತರಕಾರಿ, ಕಾಳುಗಳ ಸೇವನೆ ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ಸ್ಪಂದನ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಾರ್ವಜನಿಕರಿ ಆರೋಗ್ಯ ತಪಾವಣೆ ನಡೆಸಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಜವರೇಗೌಡ, ಮಾಂಡವ್ಯ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಶಿವಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.