ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಮಧ್ಯಾಹ್ನದ ಊಟ ಯೋಜನೆ ಚೆನ್ನಾಗಿ ಸಾಗುತ್ತಿದ್ದು, ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಬಿಸಿಯೂಟದ ಜೊತೆ ರಾಗಿ ಮಾಲ್ಟ್ (ರಾಗಿ ಗಂಜಿ) ಕೊಡುವ ನಿರ್ಧಾರ ಮಾಡಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಒಂದು ಎನ್ಜಿಒದವರು ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದರು. ಅದು ಯಶಸ್ವಿಯಾಗಿದೆ. ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದೇವೆ. ಕ್ಷೀರಭಾಗ್ಯದ ಹಾಲಿನ ಜೊತೆ ಇದನ್ನೂ ಕೊಡಲಾಗುವುದು” ಎಂದರು.
ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಬಗ್ಗೆ ಮಾತನಾಡಿದ ಸಚಿವರು, “ರಾಜ್ಯದಲ್ಲಿ ಎಸ್ಇಪಿ ಅನುಷ್ಠಾನ ಆಗಲಿದ್ದು, ಈಗಾಗಲೇ ಈ ಕುರಿತು ಮೊದಲ ಸಭೆ ನಡೆದಿದೆ. ಎಸ್ಇಪಿ ಜಾರಿ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ” ಎಂದು ಹೇಳಿದರು.
ಎಸ್ಇಪಿಗೆ ರಾಜ್ಯ ಪಠ್ಯ ಕ್ರಮವೋ, ಸಿಬಿಎಸ್ಇ ಪಠ್ಯಕ್ಕೋ ಅಂತ ತಜ್ಞರ ವರದಿ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಪಠ್ಯಕ್ರಮ ಸಿಬಿಎಸ್ಇಗಿಂತ ಉತ್ತಮವಾಗಿ ಇರಲಿದೆ. ವರದಿ ಕೈ ಸೇರಿದ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ವಿವರಿಸಿದರು.
ಯತೀಂದ್ರ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, “ಈ ವಿಚಾರ ನನಗೆ ಗೊತ್ತಿಲ್ಲ. ಸಿಎಸ್ಆರ್ ಫಂಡ್ ನನ್ನ ಇಲಾಖೆಗೆ ಬರೋದಿಲ್ಲ. ಆ ವಿಡಿಯೋ ನಾನು ನೋಡಿಲ್ಲ” ಎಂದರು.