ಲೋಕಸಭೆ ಚುನಾವಣೆ ಹೊಸ್ತಿಲಲ್ಲೆ ಪ್ರತಿಪಕ್ಷಗಳ INDIA ಬಣವು ವಿದ್ಯಾರ್ಥಿ ಸಂಘಟನೆಯನ್ನು ರಚನೆ ಮಾಡುತ್ತಿದ್ದು, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಮುಂದಿಟ್ಟು ದೆಹಲಿ ಮತ್ತು ಚೆನ್ನೈನಲ್ಲಿ ರ್ಯಾಲಿಗಳನ್ನು ನಡೆಸಲು ಮುಂದಾಗಿದೆ.
ಕಾಂಗ್ರೆಸ್, ಆರ್ಜೆಡಿ, ಎಸ್ಪಿ, ಎಎಪಿ, ಸಿಪಿಐಎಂ ಮತ್ತು ಸಿಪಿಐ ಮುಂತಾದ ಪಕ್ಷಗಳ ಅಂಗಸಂಸ್ಥೆಗಳಾದ 16 ವಿದ್ಯಾರ್ಥಿ ಸಂಘಟನೆಗಳು ‘ಯುನೈಟೆಡ್ ಸ್ಟೂಡೆಂಟ್ಸ್ ಆಫ್ ಇಂಡಿಯಾ’ ಎಂಬ ಹೆಸರಿನಲ್ಲಿ ಒಟ್ಟುಗೂಡಲು ಮುಂದಾಗಿವೆ.
ವಿದ್ಯಾರ್ಥಿಗಳ ಒಕ್ಕೂಟವು ಶಿಕ್ಷಣವನ್ನು ಉಳಿಸಿ, ಎನ್ಇಪಿಯನ್ನು ತಿರಸ್ಕರಿಸಿ. ಭಾರತ ಉಳಿಸಿ, ಬಿಜೆಪಿಯನ್ನು ತಿರಸ್ಕರಿಸಿ ಎಂಬ ಘೋಷವಾಕ್ಯದೊಂದಿಗೆ ಒಗ್ಗೂಡಿದೆ.
ವಿದ್ಯಾರ್ಥಿ ಸಂಘಟನೆಯ ಒಕ್ಕೂಟ ರಚನೆಯ ಭಾಗವಾಗಿ ನ.1ರಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆನ್ಲೈನ್ ಸಭೆ ನಡೆಸಿದ್ದು, ಶಿಕ್ಷಣ ಮತ್ತು ಉದ್ಯೋಗ ರಕ್ಷಣೆಗಾಗಿ ಹೋರಾಟವನ್ನು ಬಲಪಡಿಸುವ ಬಗ್ಗೆ ನಿರ್ಧಾರವನ್ನು ಕೈಗೊಂಡಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳಾದ AISA, AISB, AISF, CRJD, CYSS, DMK ವಿದ್ಯಾರ್ಥಿ ವಿಭಾಗ, DSF, ದ್ರಾವಿಡ ವಿದ್ಯಾರ್ಥಿಗಳ ಒಕ್ಕೂಟ, NSUI, ಪ್ರಗತಿಶೀಲ ವಿದ್ಯಾರ್ಥಿಗಳ ವೇದಿಕೆ, PSU, RLD ಛತ್ರ ಸಭಾ, ಸಮಾಜವಾದಿ ಛತ್ರ ಸಭಾ , ಸತ್ರೋ ಮುಕ್ತಿ ಸಂಗ್ರಾಮ್ ವಿದ್ಯಾರ್ಥಿಗಳ ಸಂಘಟನೆಗಳು ಒಕ್ಕೂಟದ ಭಾಗವಾಗಿರಲಿದೆ.
ಸಂಘ ಪರಿವಾರದ ಶಕ್ತಿಗಳು ದೇಶದ ಶಿಕ್ಷಣ ಕ್ಷೇತ್ರ, ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಪ್ರಗತಿಪರ ಮೌಲ್ಯಗಳ ಮೇಲೆ ತಮ್ಮ ದಾಳಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಇದರ ವಿರುದ್ಧ ಹೋರಾಡಲು ವಿದ್ಯಾರ್ಥಿಗಳ ಒಕ್ಕೂಟ ರಚನೆಗೆ ಇಂಡಿಯಾ ಒಕ್ಕೂಟ ಮುಂದಾಗಿದೆ.
ಈ ಒಕ್ಕೂಟವು ದೆಹಲಿ ಮತ್ತು ಚೆನ್ನೈನಲ್ಲಿ ರ್ಯಾಲಿಯನ್ನು ಆಯೋಜಿಸಲು ತೀರ್ಮಾನಿಸಿದೆ. ಇಂದು ಈ ಬಗ್ಗೆ ಮಾತುಕತೆಗೆ ವಿದ್ಯಾರ್ಥಿಗಳ ಸಂಘಟನೆ ದೆಹಲಿಯಲ್ಲಿ ಸಭೆ ಸೇರಲಿದೆ.