ಒಂಟಿ ಮಹಿಳೆಯರನ್ನು ಹಿಂಬಾಲಿಸಿ ಹಿಂಬದಿಯಿಂದ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕನನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದ ಚಂದ್ರಶೇಖರ್ ಆರಾಧ್ಯ (35) ಬಂಧಿತ ಆರೋಪಿಯಾಗಿದ್ದು, ಈತನನ್ನು ಮಂಡ್ಯದ ಕುವೆಂಪು ನಗರದ ಬಲಮುರಿ ದೇವಸ್ಥಾನ ಹತ್ತಿರ ಪೊಲೀಸರು ಸೆರೆ ಹಿಡಿದಿದ್ದಾರೆ.
ಕಳೆದ ನ.6ರಂದು ಮಂಡ್ಯ ಕಾವೇರಿನಗರ 3ನೇ ಕ್ರಾಸ್ ನಲ್ಲಿ ಹಗಲು ಹೊತ್ತಿನಲ್ಲಿಯೇ ನಡೆದು ಹೋಗುತ್ತಿದ್ದ ಶಾಲೆಯ ಶಿಕ್ಷಕಿಯೊಬ್ಬರಿಗೆ ಹಿಂದಿನಿಂದ ಬೈಕ್ ನಲ್ಲಿ ಬಂದು ಲೈಂಗಿಕ ಕಿರುಕುಳ ನೀಡಿ ಈತ ಪರಾರಿಯಾಗಿದ್ದ.
ಈ ಬಗ್ಗೆ ಮಹಿಳಾ ಮುನ್ನಡೆಯ ಪೂರ್ಣಿಮಾ, ಕಮಲ, ನೆಲದನಿ ಬಳಗದ ಲಂಕೇಶ್ ಹಾಗೂ ಜನಶಕ್ತಿಯ ಸಿದ್ದರಾಜು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪೋಲಿಸರಿಗೆ ದೂರು ನೀಡಿದರು. ಈತ ಬೈಕಿನಲ್ಲಿ ತೆರಳುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು, ಈ ಬಗ್ಗೆ ಕಳೆದ ನ.7ರಂದು ನುಡಿಕರ್ನಾಟಕ.ಕಾಂ ವರದಿ ಪ್ರಕಟಿಸಿತ್ತು. ಆನಂತರ ಎಚ್ಚೆತ್ತ ಪೊಲೀಸರು ಕಾಮುಕನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.