ಬೆಳಗಾವಿ ಅಧಿವೇಶನದಲ್ಲಿ ಪ್ರತಿ ಪಕ್ಷಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕು, ಇಲ್ಲಿಯವರೆಗೆ ರೈತರು, ಕನ್ನಡಪರ ಹಾಗೂ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ಬಿಜೆಪಿ- ಜಾತ್ಯತೀತ ಜನತಾದಳ ಪಕ್ಷದವರು ಬೀದಿಯಲ್ಲಿ ಹೋರಾಟ ಮಾಡಿದ್ದೀರಿ, ಆಡಳಿತ ಪಕ್ಷ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಮರೆತಿರುವುದರಿಂದ ಸದನದಲ್ಲಿ ಚರ್ಚೆ ನಡೆಯುವಂತೆ ಮಾಡಲು ಒತ್ತಡ ಹಾಕಬೇಕೆಂದು ಜಿಲ್ಲಾ ರೈತ ಹಿತರಕ್ಷಣ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಆಗ್ರಹಿಸಿದರು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸ ಎಂಟನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಸರ್ಕಾರ ಏನು ಮಾಡಲಿದೆ ಎಂಬುದು ಅವರಿಗೆ ಬಿಟ್ಟದ್ದು, ಜನತೆ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದಾರೆ, ಸರ್ಕಾರ ಕಾವೇರಿ ವಿಷಯದಲ್ಲಿ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡುತ್ತೇವೆ, ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲಿದೆಯಾ ನೋಡೋಣ ಎಂದರು.
ಮೇಕೆದಾಟು ವಿಚಾರದಲ್ಲಿ ಕರ್ನಾಟಕ ಗಡಿ ಭಾಗದಲ್ಲಿ ಯಾವುದೇ ಯೋಜನೆ ರೂಪಿಸಬಾರದು ಎಂದು ತಮಿಳುನಾಡು ತಕರಾರು ಮಾಡಿದೆ, ಆದರೆ ಅವರ ಗಡಿ ಭಾಗದಲ್ಲಿ ಯೋಜನೆ ಮಾಡಬಹುದಂತೆ, ಇಂತಹ ಇಬ್ಬಗೆ ನೀತಿ ವಿರುದ್ಧ ರಾಜ್ಯ ಸರ್ಕಾರ ಹೋರಾಟ ನಡೆಸಿ, ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಹಲವರಿಂದ ಉಪವಾಸ
ಇಂದಿನ ಸತ್ಯಾಗ್ರಹದಲ್ಲಿ ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್ ನಾರಾಯಣ್, ಪ್ರಜ್ವಲ್ ಹೊಸ ಬೂದನೂರು, ಮಂಡ್ಯದ ಸುಭಾಷ್ ನಗರದ ಲೋಹಿತ್, ರಾಜಕುಮಾರ್ ಬಡಾವಣೆಯ ಸಿ ಸ್ವಾಮಿ, ಎ ಆರ್ ಚಂದ್ರೇಶ್ ಅಣ್ಣೂರು, ಮ್ಯಾತೂ, ಅರುಣ್ ಕುಮಾರ್ ಕಾರಸವಾಡಿ ಭಾಗಿಯಾದರು.
ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಹುರುಗಲವಾಡಿ ರಾಮಯ್ಯ, ಮಂಜುಳಾ, ಎಂ ಎಲ್ ತುಳಸೀದರ್, ಮಲ್ಲೇಶ್ ಭಾಗವಹಿಸಿದ್ದರು.