ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಮಹದೇವಯ್ಯ ಅವರ ಮೃತದೇಹ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಪತ್ತೆಯಾಗಿದೆ.
ಎಂಎಲ್ಸಿ, ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ಅವರ ಸಂಬಂಧಿಯಾಗಿರುವ ಮಹದೇವಯ್ಯ ಅವರು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದ ಮನೆಯಿಂದ ನಾಪತ್ತೆಯಾಗಿದ್ದರು. ಸೋಮವಾರ (ಇಂದು) ಬೆಳಗ್ಗೆ ಅವರ ಕಾರು ಹನೂರು ಬಳಿಯ ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯದ ಕೇಂದ್ರದ ಬಳಿ ಪತ್ತೆಯಾಗಿತ್ತು.
ಕಾರಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು. ಕಾರಿನ ಗಾಜು ಕೂಡ ಒಡೆದಿತ್ತು. ಈಗ ಮೃತದೇಹ ಪತ್ತೆಯಾಗಿದೆ. ಅವರನ್ನು ಅಪಹರಿಸಿ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಮಹದೇವಯ್ಯ ಅವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಮೃತದೇಹವನ್ನು 50 ಅಡಿ ಎತ್ತರದಿಂದ ಬೀಸಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ರಾಮಾಪುರದಲ್ಲಿ ಕಾರು ಇರುವ ಬಗ್ಗೆ ಭಾನುವಾರ ಸಂಜೆ ಮಾಹಿತಿ ದೊರೆತಿತ್ತು. ಶನಿವಾರವೇ ಗ್ರಾಮಕ್ಕೆ ಕಾರು ಬಂದಿದೆ. ಆ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನಿಖೆ ನಡೆಯುತ್ತಿದೆ” ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ತಿಳಿಸಿದ್ದಾರೆ.