ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಬಾಕಿ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ರೈತರು ಮಂಡ್ಯದಲ್ಲಿ ಮಂಗಳವಾರ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತಸಂಘದ ನೇತೃತ್ವದಲ್ಲಿ ಮಂಡ್ಯನಗರದ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬರೋಡಾ ಬ್ಯಾಂಕಿನ ಶಾಖೆಗಳಲ್ಲಿ ರೈತರು ಪಡೆದಿರುವ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಿಸಾನ್ ಸಮ್ಮಾನ್, ಹಾಲಿನ ಪ್ರೋತ್ಸಾಹಧನ, ವಿಧವಾ ವೇತನ, ವೃದ್ದಾಪ್ಯವೇತನ, ಅಂಗವಿಕಲರ ವೇತನ, ನರೇಗಾ ಕೂಲಿ, ಅನ್ನಭಾಗ್ಯ, ಸಾಮಾಜಿಕ ಭದ್ರತಾ ಯೋಜನೆ ಮೊಬಲಗನ್ನು ಬ್ಯಾಂಕ್ ಅಧಿಕಾರಿಗಳು ಬಾಕಿ ಇರುವ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಹಣವನ್ನು ಫಲಾನುಭವಿಗಳ ಖಾತೆಗೆ ಮರು ಜಮಾ ಮಾಡಬೇಕು, ಫಲಾನುಭವಿಗಳ ಒಪ್ಪಿಗೆ ಇಲ್ಲದೆ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.
ಸಾಲ ಪಾವತಿಸಿದರೂ ಚಿನ್ನಾಭರಣ ಕೊಡುತ್ತಿಲ್ಲ
ಅಡಮಾನ ಇರಿಸಿರುವ ಚಿನ್ನಾಭರಣ ಬಿಡಿಸಿಕೊಳ್ಳಲು ಸಾಲಗಾರರು ಹೋದಾಗ ಹಣ ಪಾವತಿಸಿದ ನಂತರವು ಸಾಲ ಬಾಕಿ ಇರುವುದರಿಂದ ಸಾಲ ಮರುಪಾವತಿಸಿದ ಮೇಲೆ ಆಭರಣ ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಇದು ಧೋರಣೆ ಖಂಡನೀಯ, ಒಂದು ಸಾಲಕ್ಕೂ, ಮತ್ತೊಂದು ಸಾಲಕ್ಕೂ ಜೋಡಣೆ ಮಾಡದೆ ಸಾಲ ಮರು ಪಾವತಿಸಿದವರಿಗೆ ಆಭರಣಗಳನ್ನು ನೀಡುವಂತೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ರೈತರು ಪಡೆದಿರುವ ಯಾವುದೇ ತರಹದ ಸಾಲಗಳಿಗೆ ಬಡ್ಡಿ ಹಾಕುವುದನ್ನು ನಿಲ್ಲಿಸಬೇಕು. ಮುಂದಿನ ಎರಡು ವರ್ಷಗಳವರೆಗೆ ಸಾಲ ವಸೂಲಿ ಅಡಮಾನ ಚಿನ್ನ ಬಿಡಿಸಿಕೊಳ್ಳುವಂತೆ ಹಾಗೂ ಹರಾಜು ಮಾಡುತ್ತೇವೆ ಎಂದು ನೋಟೀಸ್ ನೀಡಬಾರದು. ಬಲವಂತದ ಸಾಲ ವಸೂಲಿ, ಹರಾಜು ಪ್ರಕ್ರಿಯೆ ಬ್ಯಾಂಕ್ ಶಾಖೆಗಳಲ್ಲಿ ಕಂಡು ಬಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ ಎಲ್ ಕೆಂಪೂಗೌಡ, ಮುಖಂಡರಾದ ಲಿಂಗಾಪ್ಪಾಜಿ, ಪ್ರಸನ್ನಗೌಡ, ಶಿವಳ್ಳಿ ಚಂದ್ರು ನೇತೃತ್ವ ವಹಿಸಿದ್ದರು.