ಮಳವಳ್ಳಿ ಪುರಸಭೆ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಿಢೀರನೇ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯತೆ ಏನಿತ್ತು, ಪುರಸಭೆ ಮುಖ್ಯಾಧಿಕಾರಿಗಳು ಸದಸ್ಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕೆಲವು ಪುರಸಭೆ ಸದಸ್ಯರು ಪುರಸಭೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಆಡಳಿತಾಧಿಕಾರಿಗಳು ನಾಲ್ಕು ಸಭೆಗಳನ್ನು ಮಾಡಿದ್ದಾರೆ, ನಾಲ್ಕು ತುರ್ತುಸಭೆಯ ನಡವಳಿಯಲ್ಲಿ ಹಾಜರಾತಿಯಲ್ಲಿ 19 ಹಾಜರಿ ಮತ್ತು 4 ಗೈರುಹಾಜರಿ ಎಂದು ತೋರಿಸಿದ್ದಾರೆಂದು ಸದಸ್ಯರು ದೂರಿದರು.
ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಮಾತನಾಡಿ, ಅನುದಾನಗಳ ಲಭ್ಯತೆ ಮೇರೆಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ, ಯಾವ ವಾರ್ಡ್ ಗೆ ಕೊಡಬೇಕು ಅಥವಾ ಬೇಡ ಎನ್ನುವ ಬದಲು, ಸರ್ಕಾರ ಅನುದಾನ ನೀಡಿದ ಸಂದರ್ಭದಲ್ಲಿ ಕೆಲವು ಮಾರ್ಗಸೂಚಿಗಳನ್ನು ನೀಡಿರುತ್ತದೆ, ಅದರಂತೆ ಕುಡಿಯುವ ನೀರು, ಲೈಟ್, ಸ್ಮಶಾನ ಮತ್ತು ರಸ್ತೆ, ಚರಂಡಿ ಅಭಿವೃದ್ದಿಗಳನ್ನು ಮಾಡಬೇಕಾಗುತ್ತದೆ, ಅದರ ಪ್ರಕಾರವೇ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದರು.
ಅರ್ಥಿಕ ವರ್ಷ ಕೊನೆಗೊಳ್ಳುತ್ತಿರುವುದರಿಂದ ಪುರಸಭೆಯಲ್ಲಿ ಅಧ್ಯಕ್ಷರು ಇಲ್ಲದಿರುವುದರಿಂದ ಆಡಳಿತಾಧಿಕಾರಿಗಳು ಕೆಲವು ನಿರ್ಧಾರವನ್ನು ಕೈಗೊಳ್ಳುವ ಹಕ್ಕನ್ನು ಹೊಂದಿದ್ದಾರೆ, ಅಂದರಂತೆ ಸಾರ್ವಜನಿಕರ ಹಿತದೃಷ್ಠಿಯಿಂದ ಕೆಲವು ತುರ್ತು ನಿರ್ಣಯಗಳನ್ನು ಕೈಗೊಳ್ಳಲಾಗಿದೆ, ಯಾವುದೇ ಸದಸ್ಯರನ್ನು ಸಭೆಗೆ ಕರೆದಿಲ್ಲ, ನಡವಳಿಯ ನಕಲು ತೆಗೆದುಕೊಂಡು ಪೆಸ್ಟ್ ಮಾಡುವ ಸಂದರ್ಭದಲ್ಲಿ ಹಾಜರು ಮತ್ತು ಗೈರು ಹಾಜರಿ ಎಂದು ಕೈತಪ್ಪಿನಿಂದ ಬಂದಿದೆ, ಕೆಲಸದ ಒತ್ತಡದಲ್ಲಿ ತಪ್ಪು ಆಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಸ್ವಷ್ಟಪಡಿಸಿದರು.
ಪ್ರತಿಭಟನೆಯ ಸುದ್ದಿ ತಿಳಿದು ತಹಸಿಲ್ದಾರ್ ಕೆ ಎನ್ ಲೋಕೇಶ್ ಪುರಸಭೆ ಸದಸ್ಯರ ಜೊತೆ ಮಾತನಾಡಿ, ಪರಿಶೀಲನೆ ಮಾಡಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ ಮೇಲೆ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಪ್ರಶಾಂತ್, ಸಿದ್ದರಾಜು, ನಂದಕುಮಾರ್, ಕುಮಾರ್, ಪುಟ್ಟಸ್ವಾಮಿ, ಕೃಷ್ಣ, ರವಿ, ಬಸವರಾಜು ,ರಾಧ ಸೇರಿದಂತೆ ಇತರರು ಇದ್ದರು.