ಮಟಮಟ ಮಧ್ಯಾಹ್ನ ರೈತನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ರೈತ ಶಶಿಕುಮಾರ್ (45) ಚಿರತೆ ದಾಳಿಗೆ ತುತ್ತಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂದು ಮಧ್ಯಾಹ್ನ ಜಮೀನಿನಲ್ಲಿ ಕೆಲಸ ಮಾಡುವಾಗ, ಚಾಮನಹಳ್ಳಿ ಗ್ರಾಮದ ಭತ್ತದ ಗದ್ದೆಯಲ್ಲಿ ಬೀಡು ಬಿಟ್ಟಿರುವ ಚಿರತೆ ದಾಳಿ ನಡೆಸಿದೆ, ಈ ಸ್ಥಳದಲ್ಲಿ 2 ಚಿರತೆಗಳು ಬೀಡು ಬಿಟ್ಟಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ರೈತನ ಕೈ ಮೇಲೆ ದಾಳಿ ಮಾಡಿದ ಚಿರತೆಯು ನಂತರ ಮೇಕೆಯೊಂದನ್ನು ಹೊತ್ತೊಯ್ದಿದೆ. ಏಕಾಏಕಿ ಚಿರತೆ ದಾಳಿಯಿಂದ ಭಯಭೀತರಾಗಿರುವ ಗ್ರಾಮದ ಜನತೆ, ಕೂಡಲೇ ಚಿರತೆಗಳ ಸೆರೆಗೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.