ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಕಾವೇರಿ ಬಗ್ಗೆ ಚರ್ಚೆ ನಡೆಸದೇ ಜನಪ್ರತಿನಿಧಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆದ 21ನೇ ದಿನದ ಸರದಿ ಉಪವಾಸದಲ್ಲಿ ಭಾಗವಹಿಸಿದ ಮುಖಂಡರು, ಅಧಿವೇಶನದಲ್ಲಿ ಕಾವೇರಿ ಬಗ್ಗೆ ಚರ್ಚೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಗಾರರ ತೀವ್ರ ವಿರೋಧ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು.
ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮುಂದುವರೆದಿದ್ದು, ವಾಮಮಾರ್ಗದ ಮೂಲಕ ನೀರು ಬಿಡುತ್ತಿರುವುದರ ಜೊತೆಗೆ ಸದನದಲ್ಲಿ ಚರ್ಚೆ ಮಾಡದೆ ರೈತರಿಗೆ ದ್ರೋಹ ಮಾಡುತ್ತಿದೆ ಎಂದು ಹೋರಾಟಗಾರರು ಕಿಡಿಕಾರಿದರು. ಇಂದಿನ ಸರದಿ ಉಪವಾಸದಲ್ಲಿ ಟಿ.ಬೆಳ್ಳೆಕೆರೆ ಬಿ.ಎಸ್ ನಾಗರಾಜ್, ವಳಗೇರಹಳ್ಳಿ ವೆಂಕಟೇಶ್, ಅರಕೆರೆ ಗ್ರಾಮದ ಆರ್ ಸೋಮಶೇಖರ್, ಎ.ಪಿ ರವಿ, ಚೆನ್ನಮ್ಮನ ಕೊಪ್ಪಲು ಸಿ.ಎಲ್ ಮಾಯಣ್ಣ ಭಾಗಿಯಾದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ,ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಜೈ ಕರ್ನಾಟಕ ಪರಿಷತ್ ನ ಎಸ್.ನಾರಾಯಣ್, ಮಲ್ಲೇಶ್. ಸುಶೀಲಮ್ಮ ಭಾಗವಹಿಸಿದ್ದರು.