ಸಂಸತ್ ಮೇಲಿನ ದಾಳಿಯ ಕಿಂಗ್ ಪಿನ್ ಎಂದು ಹೆಸರಾಗಿರುವ ಲಲಿತ್ ಝಾ ನಡೆಗೆ ಆತನ ಸಹೋದರ ಆಘಾತ ವ್ಯಕ್ತಪಡಿಸಿದ್ದಾರೆ.
ಸಂಸತ್ ಮೇಲಿನ ದಾಳಿಯ ಹಿಂದಿನ ಮಾಸ್ಟರ್ಮೈಂಡ್ ಎಂದು ಹೇಳಲಾದ ಲಲಿತ್ ಝಾ ನ ಹಿರಿಯ ಸಹೋದರ ಶಂಭು ಝಾ ಮಾಧ್ಯಮಗಳ ಜೊತೆ ಮಾತನಾಡಿ, ಈ ಘಟನೆಯಿಂದ ಇಡೀ ಕುಟುಂಬವು ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
ಕಳೆದ ಗುರುವಾರ ಸಂಜೆ ನವದೆಹಲಿಯಲ್ಲಿ ಲಲಿತ್ ಅವರನ್ನು ಬಂಧಿಸಲಾಗಿತ್ತು. ನಂತರ ದೆಹಲಿ ಕರ್ತವ್ಯ ಪಥ್ ಪೊಲೀಸ್ ಠಾಣೆಯ ವಿಶೇಷ ಸೆಲ್ಗೆ ಆತನನ್ನು ಹಾಕಲಾಯಿತು. ಲಲಿತ್ ಝಾ ಹೇಗೆ ಇಂತಹ ಘಟನೆಯಲ್ಲಿ ಭಾಗಿಯಾಗಿದ್ದಾನೆಂದು ನಮಗೆ ತಿಳಿದಿರಲಿಲ್ಲ. ಆತ ಯಾವಾಗಲೂ ಈ ಜಂಜಾಟ, ತೊಂದರೆಯಾಗುವ ಕೆಲಸಳಿಂದ ದೂರವಿದ್ದ. ಆತ ಬಾಲ್ಯದಿಂದಲೂ ಶಾಂತ ಸ್ವಭಾವದವರು, ತುಂಬಾ ಅಂತರ್ಮುಖಿಯಾಗಿರುತ್ತಿದ್ದ. ಅಲ್ಲದೇ ಲಲಿತ್ ಝಾ ಎನ್ಜಿಒಗಳೊಂದಿಗೆ ಕೆಲಸ ಮಾಡುತ್ತಿದ್ದ, ಅಲ್ಲದೇ ಖಾಸಗಿ ಶಿಕ್ಷಕನಾಗಿದ್ದ ಎಂಬುದಷ್ಟೆ ನಮೆಗೆ ಗೊತ್ತು ಎಂದು ಶಂಭು ಝಾ ವಿವರಿಸಿದ್ದಾರೆ.
ಟಿವಿ ಚಾನೆಲ್ ಗಳನ್ನು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಆತನನ್ನು ನೋಡಿ, ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇವೆ, ಕಳೆದ ಬುಧವಾರ ರಾತ್ರಿಯಿಂದ ಆತನ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. “ನಾವು ಲಲಿತ್ ನನ್ನು ಕೊನೆಯದಾಗಿ ನೋಡಿದ್ದು ಡಿಸೆಂಬರ್ 10 ರಂದು. ನಾವು ಬಿಹಾರದ ನಮ್ಮ ಊರಿಗೆ ಹೋದಾಗ, ಆತ ಸೀಲ್ದಾಹ್ ನಿಲ್ದಾಣದಲ್ಲಿ ನಮ್ಮನ್ನು ನೋಡಲು ನಮ್ಮೊಂದಿಗೆ ಬಂದಿದ್ದ. ಮರುದಿನ ಆತ ನಮಗೆ ಕರೆ ಮಾಡಿ, ಕೆಲವು ವೈಯಕ್ತಿಕ ಕೆಲಸಕ್ಕಾಗಿ ನವದೆಹಲಿಗೆ ಹೋಗುವುದಾಗಿ ಹೇಳಿದ್ದ. ನಾವು ಆತನೊಂದಿಗೆ ಅಂದೆ ಕೊನೆಯ ಬಾರಿಗೆ ಮಾತನಾಡಿದ್ದು ಎಂದು ವಿವರಿಸಿದರು.
ಲಲಿತ್ ಝಾನ ನೆರೆಹೊರೆಯವರು ಸುದ್ದಿ ವಾಹಿನಿಗಳಲ್ಲಿ ಆತನ ಚಿತ್ರಗಳನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆತನ ಕುಟುಂಬವು ಕೊಲ್ಕತ್ತದ ಉತ್ತರ 24 ಪರಗಣ ಜಿಲ್ಲೆಯ ಬಾಗುಯಾಟಿಗೆ ಸ್ಥಳಾಂತರಗೊಂಡಿತ್ತು.
ಬುರ್ರಾಬಜಾರ್ ಪ್ರದೇಶದ ಟೀ ಸ್ಟಾಲ್ ಮಾಲೀಕ ಪಾಪನ್ ಶಾ ಮಾತನಾಡಿ, ಎರಡು ವರ್ಷಗಳ ಹಿಂದೆ ಲಲಿತ್ ನಾಪತ್ತೆಯಾಗಿದ್ದ. ಆತ ಶಿಕ್ಷಕನೆಂದೇ ಹೆಸರಾಗಿದ್ದ. ಸ್ಥಳೀಯ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಿದ್ದ. ಕೆಲ ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದು ಒಂಟಿಯಾಗಿ ವಾಸವಾಗಿದ್ದ. ಆತ ಸ್ಥಳೀಯರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ. ಕೆಲವೊಮ್ಮೆ ಆತ ನನ್ನ ಸ್ಟಾಲ್ನಲ್ಲಿ ಚಹಾ ಕುಡಿಯಲು ಬರುತ್ತಿದ್ದ. ಆದರೆ ಎರಡು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಪ್ರದೇಶವನ್ನು ಬಿಟ್ಟು ಹೋಗಿದ್ದ, ಮತ್ತೆ ಹಿಂತಿರುಗಲಿಲ್ಲ ಎಂದು ಹೇಳಿದ್ದಾರೆ.