ಮಂಡ್ಯ ತಾಲೂಕಿನ ಹಳೆ ಬೂದನೂರು ಗ್ರಾಮದಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸಲಾಗಿದ್ದ 105 ಲೀಟರ್ ಕಲಬೆರಕೆ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಕಲಬೆರಕೆ ಸೇಂದಿ ತಯಾರಿಸಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಲಬೆರಕೆ ಸೇಂದಿಯ ಜೊತೆಗೆ 5 ಕೆಜಿ 750 ಗ್ರಾಂ ಅಮೋನಿಯಂ ಸಲ್ಪೇಟ್ (Ammonium sulphate) ಪೌಡರ್, 1 ಕೆಜಿ 500 ಗ್ರಾಂ CH ಪೌಡರ್, for industrial use only NON EDIBLE ಎಂದು ನಮೂದಾಗಿರುವ 230 ಗ್ರಾಂ ಪೌಡರ್ ಹಾಗೂ ನೊರೆ ಬರಿಸಲು ಮಿಶ್ರಣ ಮಾಡುವ ಹೆಸರು ನಮೂದು ಮಾಡದ 1 ಕೆಜಿ ಪೌಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಅಬಕಾರಿ ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಮಂಡ್ಯ ಉಪ ವಿಭಾಗದ ಅಬಕಾರಿ ಉಪ ಆಯುಕ್ತರು, ಅಬಕಾರಿ ಉಪ ಅಧೀಕ್ಷಕರ ನಿರ್ದೇಶನದಲ್ಲಿ ಮತ್ತು ಅಬಕಾರಿ ನಿರೀಕ್ಷಕರು ಈ ಕಾರ್ಯಾಚರಣೆ ನಡೆಸಿದರು. ದಾಳಿಯಲ್ಲಿ ಸಿಬ್ಬಂದಿಗಳಾದ ಗಣೇಶ ಕೆ ಪಿ, ಸುರೇಶ ಬಿ ಸಿ ಹಾಗೂ ಯಶವಂತ ಪಿ ಹಾಜರಿದ್ದರು.