ಮಂಡ್ಯ ನಗರದ ಫ್ಯಾಕ್ಟರಿ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಇತ್ತಿಚೇಗೆ ನಡೆದ ಯುವಕ ಗುರುವಿಲಾಸ್ ಕೊಲೆ ಪ್ರಕರಣವನ್ನು ಬೇಧಿಸಿರುವ ಮಂಡ್ಯ ಪೂರ್ವ ಪೊಲೀಸ್ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮದ್ದೂರು ತಾಲ್ಲೂಕಿನ ಕಡಿಲುವಾಗಿಲು ಗ್ರಾಮದ ಶಿವಕುಮಾರ್ ಹಾಗೂ ಮಂಡ್ಯನಗರದ ಗುತ್ತಲು ಕಾಲೋನಿಯ ರಾಘವೇಂದ್ರ ಬಂಧಿತ ಆರೋಪಿಗಳು.
ಕೊಲೆ ನಡೆದಿದ್ದು ಹೇಗೆ…
ಕಳೆದ ಡಿ.14ರಂದು ಸಂಜೆ ಮಂಡ್ಯನಗರದ ಫ್ಯಾಕ್ಟರಿ ವೃತ್ತದಲ್ಲಿರುವ ಸಿದ್ದಾರ್ಥ ಕೊಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆರೋಪಿಗಳಾದ ಶಿವಕುಮಾರ್ ಹಾಗೂ ರಾಘವೇಂದ್ರ ಇಬ್ಬರು ಕುಡಿಯುತ್ತ ಕುಳಿತ್ತಿದ್ದರು, ಈ ಸಂದರ್ಭದಲ್ಲಿ ಗುರುವಿಲಾಸ್ ಅಲ್ಲಿಗೆ ತೆರಳಿದ್ದ. ಆತನನ್ನು ಕಂಡ ಶಿವಕುಮಾರ್, ತಮ್ಮ ಜೊತೆಯಲ್ಲೇ ಕುಡಿಯುವಂತೆ ಕರೆದಿದ್ದ. ನಂತರ ಮೂವರು ಒಟ್ಟಿಗೆ ಕುಡಿಯುತ್ತಿದ್ದರು. ಈ ಸಂದರ್ಭದಲ್ಲಿ ಯಾರದೋ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಿಲಾಸ್ ಹಾಗೂ ಶಿವಕುಮಾರ್ ನಡುವೆ ಜಗಳ ಪ್ರಾರಂಭವಾಯಿತು, ಈ ಸಂದರ್ಭದಲ್ಲಿ ಗುರುವಿಲಾಸ್, ಶಿವಕುಮಾರ್ ಹಾಗೂ ರಾಘವೇಂದ್ರನನ್ನು ಅವಾಚ್ಯ ಪದಗಳಿಂದ ನಿರಂತರವಾಗಿ ಬೈದು ಅವಮಾನಿಸಿದ್ದ. ಈ ದೃಶ್ಯವನ್ನು ಬಾರಿನಲ್ಲಿ ಎಲ್ಲರೂ ನೋಡುತ್ತಿದ್ದರಿಂದ ಶಿವಕುಮಾರ್ ಗೆ ಅವಮಾನವಾಗಿತ್ತು. ಇದರಿಂದ ಕುಪಿತಕೊಂಡ ಶಿವಕುಮಾರ್ ಮತ್ತು ರಾಘವೇಂದ್ರ ಇಬ್ಬರು ಸೇರಿ, ಗುರುವಿಲಾಸ್ ನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದು, ಸಮೀಪದ ಅಂಗಡಿಯೊಂದಕ್ಕೆ ತೆರಳಿ ಚಾಕುವನ್ನು ಖರೀದಿ ಮಾಡಿ ಬಂದಿದ್ದರು.
ಡಿ.14ರ ರಾತ್ರಿ 10.15ರ ಸುಮಾರಿಗೆ ಈ ಇಬ್ಬರು ಆರೋಪಿಗಳು ಗುರುವಿಲಾಸ್ ನನ್ನು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕೊಲೆ ಬಗ್ಗೆ ವಿ.ಜೆ.ಶರತ್ ಎಂಬುವವರು ದೂರು ದಾಖಲಿಸಿದ್ದರು, ನಂತರ ಪ್ರಕರಣದ ಬೆನ್ನತ್ತಿದ ಪೊಲೀಸರು ಮೈಸೂರಿನಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷ ಸಿ.ಇ. ತಿಮ್ಮಯ್ಯ, ಮಂಡ್ಯ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಶಿವಮೂರ್ತಿ.ಜೆ.ಆರ್ ಅವರ ಮಾರ್ಗದರ್ಶನದಲ್ಲಿ ಮಂಡ್ಯನಗರ ವೃತ್ತದ ಸಿ.ಪಿ.ಐ ಜಾಯ್ ಅಂಥೋಣಿ ಅವರ ನೇತೃತ್ವದಲ್ಲಿ ಮಂಡ್ಯ ಪೂರ್ವ ಪೊಲೀಸ್ ಠಾಣೆ ಪಿಎಸ್ಐ ಅಯ್ಯನಗೌಡ ಶಿವಳ್ಳಿ ಪೊಲೀಸ್ ಠಾಣೆ ಪಿ.ಎಸ್.ಐ ರವಿಕುಮಾರ್, ಮಂಡ್ಯ ಗ್ರಾಮಾಂತರ ಪೊಲೀಸ್ ರಾಣಾ ಪಿ.ಎಸ್.ಐ ಮಹೇಶ್, ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಎಎಸ್ಐ ಲಿಂಗರಾಜು, ಸಿಬ್ಬಂದಿಯವರಾದ ಲೋಕೇಶ್, ಮಹೇಶ್, ಆನಂದ್, ಶ್ರೀನಿವಾಸ, ಮಂಜುನಾಥ. ಅನಿಲ್, ಮಂಜು (ಕಬ್ಬಡ್ಡಿ), ಲೋಕೇಶ್ ಮತ್ತು ರವಿಕಿರಣ್ ಅವರ ತಂಡವನ್ನು ರಚಿಸಲಾಗಿತ್ತು.
ಕೃತ್ಯ ನಡೆದ ನಂತರ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿರುವ ಮಂಡ್ಯ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಶ್ಲಾಘಿಸಿ, ಪ್ರಶಂಸಿದ್ದಾರೆ.