ಮಂಡ್ಯನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಸ್ಮಾರ್ಟ್ ಬಜಾರ್ ಡ್ಯಾಮೇಜ್ ಟೀ ಶರ್ಟ್ ನೀಡಿ, ತಮ್ಮಿಂದ ₹1199 ಬಿಲ್ ಪಡೆದು ವಂಚಿಸಿದೆ ಎಂದು ಮಂಡ್ಯನಗರದ ಅನ್ನಪೂರ್ಣೇಶ್ವರಿ ಬಡಾವಣೆಯ ನಿವಾಸಿ, ಗ್ರಾಹಕ ಪಾಲನೇತ್ರ ಆರೋಪಿಸಿದ್ದಾರೆ.
ಕಳೆದ ಡಿ.27ರಂದು ಸಂಜೆ 6 ಗಂಟೆಯ ಸಂದರ್ಭದಲ್ಲಿ ಬಟ್ಟೆ ಖರೀದಿಗಾಗಿ ಸ್ಮಾರ್ಟ್ ಬಜಾರ್ ಗೆ ತೆರಳಿದ್ದೆ. ಅಲ್ಲಿ ಅವಸರದಲ್ಲಿ ಬಟ್ಟೆಯನ್ನು ಖರೀದಿಸಿ, ಬಿಲ್ ಪಾವತಿಸಿ ಮನೆಗೆ ಬಂದಿದ್ದೆ. ಆದರೆ ಡಿ.29ರಲ್ಲಿ ಮೈಸೂರಿಗೆ ತೆರಳುವುದಕ್ಕಾಗಿ ಹೊಸ ಬಟ್ಟೆಯನ್ನು ಧರಿಸಲು ಮುಂದಾಗ ಟೀ ಶರ್ಟ್ ಡ್ಯಾಮೇಜ್ ಆಗಿರುವುದು ಗಮನಕ್ಕೆ ಬಂತು. ತಕ್ಷಣ ಸ್ಮಾರ್ಟ್ ಬಜಾರ್ ಗೆ ತೆರಳಿ, ಬಟ್ಟೆಯನ್ನು ಬದಲಾಯಿಸಿ ಕೊಡುವಂತೆ ಮನವಿ ಮಾಡಿದೆ. ಆಗ ಅಲ್ಲಿನ ಸಿಬ್ಬಂದಿ ಖರೀದಿ ಮಾಡಿದ ಬಟ್ಟೆಯನ್ನು ಬದಲಾಯಿಸುವುದಿಲ್ಲ, ನೀವು ಬಟ್ಟೆ ಖರೀದಿ ಮಾಡುವಾಗ ಪರೀಕ್ಷಿಸಿ ತೆಗೆದುಕೊಳ್ಳಬೇಕಿತ್ತು. ಬಟ್ಟೆಯನ್ನು ನೀವೇ ಡ್ಯಾಮೇಜ್ ಮಾಡಿಕೊಂಡು ಬಂದಿದ್ದೀರಿ ಎಂದು ದಬಾಯಿಸಿದರು ಎಂದು ಗ್ರಾಹಕ ಪಾಲನೇತ್ರ ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.
ಅನ್ಲೈನ್ ನಲ್ಲಿ ಖರೀದಿ ಮಾಡಿದರೂ ಉತ್ಪನ್ನ ನಮಗೆ ಇಷ್ಟವಾಗದ ಪಕ್ಷದಲ್ಲಿ ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ, ಆದರೆ ಮಂಡ್ಯ ಸ್ಮಾರ್ಟ್ ಬಜಾರ್ ಹಣ ಪಡೆದರೂ ಕೂಡ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿಲ್ಲ, ಅಲ್ಲಿನ ಸಿಬ್ಬಂದಿ ಗ್ರಾಹಕರೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸುತ್ತಿಲ್ಲ, ಇದರ ವಿರುದ್ದ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡುವುದಾಗಿ ಪಾಲನೇತ್ರ ಅವರು ನುಡಿಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.