ವರದಿ: ಪ್ರಭು ವಿ ಎಸ್
ಮಂಡ್ಯ ಜಿಲ್ಲೆಯ ಪ್ರಪ್ರಥಮ ಬಾಲಕಿಯರ ಪ್ರೌಢಶಾಲೆ ಎಂದು ಹೆಸರಾಗಿರುವ ಕಮಲ ನೆಹರು ಬಾಲಿಕಾ ಪ್ರೌಢಶಾಲೆಯಯಲ್ಲಿ ಜ.7ರಂದು ಪುನರ್ ಸಮ್ಮಿಲನ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ ಎಂದು ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ತಿಳಿಸಿದರು.
ಮದ್ದೂರು ಪಟ್ಟಣದ ಕಮಲಾ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲಾ ಹಳೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಕೆ.ವೀರಣ್ಣಗೌಡ ಹಾಗೂ ಕೆ.ಟಿ.ಚಂದು ಅವರ ದೂರದೃಷ್ಟಿಯ ಫಲವಾಗಿ 1967ರಲ್ಲಿ ಮಹಾರಾಣಿ ಶ್ರೀತ್ರಿಪುರ ಸುಂದರಮ್ಮಣ್ಣಿ ಅವರ ಪರವಾಗಿ ರಾಜಕುಮಾರಿ ಶ್ರೀ ಗಾಯಿತ್ರಿದೇವಿ ಅವರಿಂದ ಉದ್ಘಾಟನೆಗೊಂಡ ಮಂಡ್ಯ ಜಿಲ್ಲೆ ಪ್ರಥಮ ಬಾಲಕಿಯರ ಪ್ರೌಢಶಾಲೆಗೆ 57 ವರ್ಷ ತುಂಬಿದ್ದು ಸಾವಿರಾರು ವಿದ್ಯಾರ್ಥಿನಿಯರು ಪ್ರೌಢಶಾಲಾ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ, ಈ ಸುಸಂದರ್ಭದಲ್ಲಿ ಶಾಲೆಯ ಹಳೇಯ ವಿದ್ಯಾರ್ಥಿಗಳು ಜೊತೆಗೂಡಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮವನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಹಿಳಾ ಉದ್ಯಮಿ ಎಂ.ಎಂ. ಸುಶೀಲದೇವಿ ಸತೀಶ್ಚಂದ್ರ ಉದ್ಘಾಟಿಸಲಿದ್ದು, ನಿವೃತ್ತ ಪ್ರಾಧ್ಯಾಪಕಿ ಎಂ ಶ್ರೀಲತಾ, ಶಾಲೆಯ ಬೋಧಕ- ಬೋಧಕೇತರರಿಗೆ ನುಡಿನಮನ ಸಲ್ಲಿಸುವರು. ಹಿರಿಯ ವಿದ್ಯಾರ್ಥಿಗಳಾದ ಎಂ.ಶಾಂತ, ಆರ್.ಸೌಮ್ಯ ಶ್ರೀಹರ್ಷ, ನಿವೃತ್ತ ಬೋಧಕ-ಬೋಧಕೇತರರಿಗೆ ಅಭಿನಂದನಾ ನುಡಿ ಸಲ್ಲಿಸುವರು ಎಂದು ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ಸಂಸ್ಧೆಯ ರೂವಾರಿ, ಗಾಂಧಿವಾದಿ, ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ 2023ನೇ ಸಾಲಿನ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ.ಚಂದು ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವಂತಹ ಗುರುವೃಂದಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಗೋಷ್ಟಿಯಲ್ಲಿ ಪ್ರಾಧ್ಯಾಪಕಿ ಎಂ.ಶ್ರೀಲತಾ, ಹಿರಿಯ ವಿದ್ಯಾರ್ಥಿಗಳು ಹಾಗೂ ಪುರಸಭಾ ಸದಸ್ಯರಾದ ಸರ್ವಮಂಗಳ, ಕೋಕಿಲ ಅರುಣ್, ವನಿತಾ, ಹಿರಿಯ ವಿದ್ಯಾರ್ಥಿಗಳಾದ ಕಲಾವತಿ, ರೂಪ, ಸುಷ್ಮಾ. ಶಾಲಿನಿ, ಜ್ಯೋತಿ, ನೇತ್ರಾವತಿ ಮತ್ತಿತರರಿದ್ದರು.