ತಾಯಿ ಮಗುವಿಗೆ ಜನನ ನೀಡಿದ ನಂತರ ಸರಿಯಾದ ಕ್ರಮದಲ್ಲಿ ಹಾಲುಣಿಸದಿದ್ದರೆ ಮಗು ಮರಣ ಹೊಂದುವ ಸಂಭವವಿರುತ್ತದೆ. ಈ ಹಿನ್ನಲೆಯಲ್ಲಿ ಮಗುವಿಗೆ ಹಾಲುಣಿಸುವ ಕ್ರಮಗಳ ಬಗ್ಗೆ ತಾಯಿಗೆ ಆಸ್ಪತ್ರೆಗಳಲ್ಲಿ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಸ್ಪತ್ರೆಗಳಲ್ಲಿ ಗರ್ಭಿಣಿಯರು ವೀಕ್ಷಿಸಲು ಅನುಕೂಲವಾಗುವ ರೀತಿ ಮಗುವಿಗೆ ಸುರಕ್ಷಿತವಾಗಿ ಹಾಲುಣಿಸುವ ಅಭ್ಯಾಸಗಳ ಫಲಕ ಹಾಗೂ ವಿಡಿಯೋ ಗಳನ್ನು ಅನಾವರಣಗೊಳಿಸಿರಬೇಕು ಎಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ನಾಲ್ಕು ಮೊಬೈಲ್ ತಂಡಗಳಿದ್ದು, ಈ ತಂಡಗಳು 0 ಯಿಂದ 18 ವರ್ಷದೊಳಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ನಡೆಸಿದ ನಂತರ ಅವರಿಗೆ ವೈದ್ಯಕೀಯ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಬೇಕಾದ ಆಸ್ಪತ್ರೆಗಳಿಗೆ ಸಂಪರ್ಕಿಸುವಂತೆ ತಿಳಿಸಲಾಗುತ್ತಿದೆ. ಇದರಲ್ಲಿ ಗಂಭೀರವಾದ ಪರಿಸ್ಥಿತಿ ಇರುವ ಮಕ್ಕಳಿಗೆ ಸರಿಯಾದ ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.
ಚಿಕ್ಕ ವಯಸ್ಸಿನಲ್ಲೇ ಮಗುವಿನಲ್ಲಿರುವ ಆರೋಗ್ಯ ತೊಂದರೆಯನ್ನು ಪತ್ತೆ ಹಚ್ಚುವುದು ಮುಖ್ಯ. ಆದರಿಂದ ಆರ್.ಬಿ.ಎಸ್.ಕೆ ತಂಡದಲ್ಲಿರುವ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು. ಆರೋಗ್ಯ ಇಲಾಖೆಯಿಂದ ನೀಡಲಾಗುವ ಮಾರ್ಗಸೂಚಿಯ ಪ್ರಕಾರ ಚೆಕ್ವಲಿಸ್ಟ್ ಮಾಡಿಕೊಂಡು ತಪಾಸಣೆ ನಡೆಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಮಿಮ್ಸ್ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಆರೋಗ್ಯ ಇಲಾಖೆಯ ಡಾ.ಅನಿಲ್ ಕುಮಾರ್, ಡಾ.ಸೋಮಶೇಖರ್, ಡಾ.ಬೆಟ್ಟಸ್ವಾಮಿ, ಡಾ.ರವೀಂದ್ರ, ಡಾ.ಜವರೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.