ಕಾವೇರಿ ಚಳವಳಿ ಪ್ರತಿಷ್ಠೆಗಾಗಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ರವಿಕುಮಾರ್ ಗಣಿಗ ಅವರು ಶುಕ್ರವಾರ ಮಂಡ್ಯನಗರದಲ್ಲಿ ಕಾವೇರಿ ಚಳವಳಿ ಭಿತ್ತಿಪತ್ರ ಅಂಟಿಸುವ ಮೂಲಕ ಬೆಂಬಲ ಸೂಚಿಸಿದರು.
ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಳೆದ 130 ದಿನದಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಕಳೆದ ಮೂರು ದಿನದಿಂದ ‘ಕಾವೇರಿ ನದಿ ನೀರು ನಮ್ಮ ಹಕ್ಕು, ಕಾವೇರಿ ರಕ್ಷಿಸೋಣ ಬನ್ನಿ’ ಎಂಬ ಭಿತ್ತಿ ಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಚಳವಳಿಯನ್ನು ಮುಂದುವರೆಸಿದೆ.
ಸಮಿತಿಯ ಮುಖಂಡರು ಭಿತ್ತಿ ಪತ್ರ ಅಭಿಯಾನ ಮುಂದುವರೆಸಿ ಶುಕ್ರವಾರ ಮಂಡ್ಯ ವಿಶ್ವವಿದ್ಯಾಲಯದ ಆವರಣಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಕರಪತ್ರ ಹಂಚಿಕೆ ಮಾಡಲು ಮುಂದಾಗಿ ಬಿತ್ತಿ ಪತ್ರವನ್ನು ಅಂಟಿಸುತ್ತಿದ್ದರು. ಇದೇ ವೇಳೆ ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದ ಶಾಸಕ ರವಿಕುಮಾರ್ ಗಣಿಗ ಇದನ್ನು ಗಮನಿಸಿ ಸ್ವತಃ ಭಾಗಿಯಾಗಿ ತಾವು ಸಹ ಭಿತ್ತಿ ಪತ್ರಗಳನ್ನು ಹೋರಾಟಗಾರರ ಜೊತೆಗೂಡಿ ಅಂಟಿಸುವ ಮೂಲಕ ಕಾವೇರಿ ನಮ್ಮದು ಹೋರಾಟವನ್ನು ಬೆಂಬಲಿಸಿದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ ಸವಿತಾ ಸಮಾಜ ರಾಜ್ಯಾಧ್ಯಕ್ಷೆ ಡಾ. ಲಕ್ಷ್ಮಿ. ಸ್ಪಂದನ ಮಹಿಳಾ ಸಂಘಟನೆ ಶ್ರೀಲತಾ. ಸುಶೀಲಾ. ಗೋಪಾಲಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ. ಅರಕೆರೆ ಸೋಮಣ್ಣ. ದಲಿತ ಸಂಘರ್ಷ ಸಮಿತಿ ಎಂ. ವಿ.ಕೃಷ್ಣ. ಅರುಣ್ ಕುಮಾರ್. ಜಯರಾಮ್ ಗುನಾಯಕನಹಳ್ಳಿ ಇತರರಿದ್ಧರು.