ಬಹುಜನ ಸಮಾಜ ಪಕ್ಷ (ಬಿಎಸ್ಪಿ) 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಹೇಳಿದ್ದು, ಮೈತ್ರಿ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಆದರೆ ಬಿಎಸ್ಪಿ INDIA ಮೈತ್ರಿ ಕೂಟ ಅಥವಾ ಎನ್ಡಿಎ ಮೈತ್ರಿ ಪಕ್ಷಗಳ ಜೊತೆ ಸೇರಿಕೊಂಡಿಲ್ಲ. ಎರಡೂ ಮೈತ್ರಿ ಪಕ್ಷಗಳಿಂದ ದೂರ ಉಳಿದುಕೊಂಡಿತ್ತು. ಈ ಮೊದಲು ಬಿಜೆಪಿ ಜೊತೆ ಬಿಎಸ್ಪಿ ಮೈತ್ರಿ ಬಗ್ಗೆ ಊಹಾಪೋಹಗಳು ಕೂಡ ಭುಗಿಲೆದ್ದಿದ್ದವು. ಬಳಿಕ INDIA ಮೈತ್ರಿ ಕೂಟದ ಜೊತೆ ಸೇರುವ ಬಗ್ಗೆಯೂ ಸುದ್ದಿಯಾಗಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮಾಯಾವತಿ ಇಂದು 68ನೇ ವರ್ಷಕ್ಕೆ ಕಾಲಿಟ್ಟಿದ್ದು, ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಮೈತ್ರಿ ನಮಗೆ ಎಂದಿಗೂ ಪ್ರಯೋಜನಕಾರಿಯಾಗಿಲ್ಲ ಮತ್ತು ಮೈತ್ರಿಯಿಂದ ನಾವು ಹೆಚ್ಚು ನಷ್ಟವನ್ನು ಅನುಭವಿಸುತ್ತೇವೆ. ಈ ಕಾರಣಕ್ಕಾಗಿ ದೇಶದ ಬಹುತೇಕ ಪಕ್ಷಗಳು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತವೆ. ಚುನಾವಣೆಯ ನಂತರ ಮೈತ್ರಿ ಮಾಡಿಕೊಳ್ಳಬಹುದು. ಸಾಧ್ಯವಾದರೆ ಚುನಾವಣೆಯ ನಂತರ ಬಿಎಸ್ಪಿ ತನ್ನ ಬೆಂಬಲವನ್ನು ನೀಡಬಹುದು. ಈಗ ಲೋಕಸಭೆ ಚುನಾವಣೆಗೆ ನಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಮಾಯಾವತಿ ಹೇಳಿದ್ದಾರೆ.
ಸೋಮವಾರ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಯಾವತಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದರು. ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ ಎಂದು ರಾಜನಾಥ್ ಸಿಂಗ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದರು.
ಮಣಿಪುರದ ಇಂಫಾಲ್ನಲ್ಲಿ ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಬಿಎಸ್ಪಿಯ ಅಮಾನತುಗೊಂಡ ಸಂಸದ ಡ್ಯಾನಿಶ್ ಅಲಿ ಅವರು ಸೇರ್ಪಡೆಗೊಂಡ ಬೆನ್ನಲ್ಲೇ ಮಾಯಾವತಿಯವರು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಲೋಕಸಭೆ ಸಂಸದ ಡ್ಯಾನಿಶ್ ಅಲಿ ಅವರನ್ನು ಇತ್ತೀಚೆಗೆ ಬಿಎಸ್ಪಿ ಅಮಾನತು ಮಾಡಿತ್ತು. ಭಾನುವಾರ ಡ್ಯಾನಿಶ್ ಅಲಿ, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಸೇರಿಕೊಂಡಿದ್ದರು. ಏಕತೆ ಮತ್ತು ನ್ಯಾಯಕ್ಕಾಗಿರುವ ಈ ದೊಡ್ಡ ಯಾತ್ರೆಯಲ್ಲಿ ಭಾಗವಹಿಸದಿದ್ದರೆ ರಾಜಕಾರಣಿಯಾಗಿ ನಾನು ಕರ್ತವ್ಯದಲ್ಲಿ ವಿಫಲನಾಗುತ್ತೇನೆ ಎಂದು ಹೇಳಿದ್ದರು.
ಮಾಯಾವತಿ ನೇತೃತ್ವದ ಬಿಎಸ್ಪಿಯು ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ವಿರೋಧ ಪಕ್ಷವಾದ INDIA ಮೈತ್ರಿ ಕೂಟದಿಂದ ದೂರ ಉಳಿದಿದ್ದರೂ ಡ್ಯಾನಿಶ್ ಅಲಿ ವಿಪಕ್ಷಗಳ ಜೊತೆ ಹೆಚ್ಚು ಗುರುತಿಸಿಕೊಂಡಿದ್ದರು. ಬಿಜೆಪಿ ಮತ್ತು ಕೇಂದ್ರ ಸರಕಾರದ ನಿಲುವುಗಳನ್ನು ವಿರೋಧಿಸುವಲ್ಲಿ ಪ್ರತಿಪಕ್ಷಗಳ ನಾಯಕರ ಜೊತೆ ಗುರುತಿಸಿಕೊಂಡಿದ್ದರು. ಇದರ ಬೆನ್ನಲ್ಲಿ ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು.
ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆಕಾಶ್ ಆನಂದ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದರು. ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಿದ್ದರು.