ಭೂಮಿಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ನಿಂತಿರುವುದೇ ಮಣ್ಣಿನ ಮೇಲೆ. ಚರ್ಮ ಇಲ್ಲದೆ ಮನುಷ್ಯನ ದೇಹ ಹೇಗೆ ಉಳಿಯುವುದಿಲ್ಲವೋ, ಅದೇ ರೀತಿ ಮಣ್ಣಿಲ್ಲದೆ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ರೈತ ಮೋರ್ಚಾ ರಾಜ್ಯ ಸಂಚಾಲಕ ಡಾ.ನವೀನ್ಕುಮಾರ್ ಹೇಳಿದರು.
ಮಂಡ್ಯ ನಗರದ ಗಾಂಧಿ ಭವನದಲ್ಲಿ ಮೈಕೋಬಿ ಫೌಂಡೇಶನ್ ಆಯೋಜಿಸಿದ್ದ ಮಣ್ಣು ಜೀವಿಸಲಿ ಅಭಿಯಾನ ಮತ್ತು ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಒದಗಿಸುವ ಧಾತು ಆ್ಯಪ್ ಬಗ್ಗೆ ಸಮಗ್ರ ಮಾಹಿತಿ ಹಾಗೂ ಸಾವಯವ ಕೃಷಿ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣಿನ ಸಹಭಾಗಿತ್ವ ವಿಲ್ಲದೆ ಈ ಮನುಕುಲ ಉಳಿಸಲು ಸಾಧ್ಯವೇ? ಎಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ಅರ್ಥಮಾಡಿಕೊಳ್ಳಬೇಕು. ಮಣ್ಣು ಜೀವಂತವಾಗಿಲ್ಲದಿದ್ದರೆ ಮನುಷ್ಯ ಬದುಕುತ್ತಾನಾ ಎನ್ನುವುದನ್ನು ಅರಿಯಬೇಕು ಎಂದರು.
ದೇಶದಲ್ಲಿ ಆಹಾರ,ಮೇವು ಅಥವಾ ನೈಸರ್ಗಿಕ ಸಂಪನ್ಮೂಲ ಇರಬಹುದು, ಶಕ್ತಿ ಮೂಲಗಳಿರಬಹುದು, ಪ್ರತಿಯೊಂದು ವಸ್ತುಗಳು, ಕೈಗಾರಿಕೆಗಗಳಿರಬಹುದು, ಮನುಕುಲವು ಕೃಷಿಯ ಭಾಗವಾಗಿದೆ.ಕೃಷಿ ಮೂಲತ: ಮಣ್ಣನ್ನು ಮರೆಯಬಾರದು. ನಾಗರೀಕತೆ ಹೋಗಿ ನಗರೀಕರಣವಾಗಿರುವ ಸನ್ನಿವೇಶದಲ್ಲಿ ಬದುಕಲಿಕ್ಕೆ ಯೋಗ್ಯರಾಗಿದ್ದೀವಾ ಎಂಬ ಪ್ರಶ್ನೆ ಹಾಕಿಕೊಂಡು ಮಣ್ಣು ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದರು.
ಇಡೀ ದೇಶದಲ್ಲಿ ಮಣ್ಣಿನ ಅಂಶ ಶೇ.36ರಷ್ಟು ನಾಶವಾಗುತ್ತಿದೆ, ಶೇ.83ರಷ್ಟು ನೀರಿನಿಂದ ಸವಕಳಿಯಾಗುತ್ತಿದೆ. ಇಂತಹ ಜೀವ ನೀಡುವ, ಅನ್ನ ನೀಡುವ ಮಣ್ಣನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವುದು ಎಲ್ಲರ ಜವಬ್ದಾರಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಸಾಧಕರಿಗೆ ಸಾವಯವ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮೈಸೂರು, ಈರೋಡು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಆಯ್ದ ಸಾವಯವ ಕೃಷಿಕರು ಆಗಮಿಸಿ ಸಮಗ್ರ ಸುಸ್ಥಿರ ಸಾವಯವ ಕೃಷಿ ಬಗ್ಗೆ ಮಾಹಿತಿ ಪಡೆದರು. ಕೃಷಿ ತಂತ್ರಜ್ಞಾನದ ಬಗ್ಗೆ ಎಲ್.ಇ.ಡಿ ಮೂಲಕ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಸಾವಯವ ಕೃಷಿ ತಜ್ಞ ಡಾ. ಕೆ.ಆರ್. ನಾಚೇಗೌಡ, ರೇಷ್ಮೆ ಇಲಾಖೆ ಉಪ ನಿರ್ದೇಶಕ ರಾಚಪ್ಪ, ಮೈಕ್ರೋಬಿ ಫೌಂಡೇಷನ್ ನ ಸಿಇಒ ಮಂಜುನಾಥ, ಮಂಡ್ಯ ಜಿಲ್ಲಾ ಸಂಚಾಲಕ ಜೋಗಿಗೌಡ, ರಾಜೇಶ್, ಶ್ರೀನಿವಾಸ್,ವಿಕ್ರಂ, ರವಿ ಮತ್ತಿತರರಿದ್ದರು.