ಮಂಡ್ಯ ಜಿಲ್ಲಾಡಳಿತದಿಂದ ಆಚರಿಸಲಾಗುವ ಎಲ್ಲಾ ಮಹನೀಯರ ಜಂಯತಿಗಳನ್ನು ಒಂದು ಜಾತಿ, ಜನಾಂಗ ಹಾಗೂ ವರ್ಗದವರಿಗೆ ಸೀಮಿತಗೊಳಿಸದೇ ಎಲ್ಲರೂ ಪಾಲ್ಗೊಂಡು ಸಹ ಮತದಿಂದ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆಯ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ದೇಶ ಹಾಗೂ ರಾಜ್ಯಕ್ಕೆ ಮಹಾನ್ ಕೊಡುಗೆ ನೀಡಿದ ಮಹನೀಯರ ಜಯಂತಿಗಳನ್ನು ಫೆಬ್ರವರಿ 1ರಂದು ಮಡಿವಾಳ ಮಾಚಿದೇವ , ಫೆಬ್ರವರಿ 10 ರಂದು ಕಾಯಕ ಶರಣರು, ಫೆಬ್ರವರಿ 15 ರಂದು ಶ್ರೀ ಸಂತ ಸೇವಾಲಾಲ್, ಫೆಬ್ರವರಿ 16 ರಂದು ಸವಿತಾ ಮಹರ್ಷಿ, ಫೆಬ್ರವರಿ 19 ರಂದು ಛತ್ರಪತಿ ಶಿವಾಜಿ, ಫೆಬ್ರವರಿ 20 ರಂದು ಸಂತ ಕವಿ ಸರ್ವಜ್ಞ ಜಯಂತಿಗಳು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು, ಸರ್ಕಾರ ನಿಗದಿಪಡಿಸಿದ ದಿನಾಂಕಗಳಂದೇ ಎಲ್ಲಾ ಜಯಂತಿಗಳು ನಗರದ ಗಾಂಧಿ ಭವನದಲ್ಲಿ ಆಚರಿಸಲಾಗುವುದು, ಆಗಾಗಿ ಎಲ್ಲಾ ಸಮುದಾಯದವರು ಭಾಗವಹಿಸಿ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಎಲ್ಲಾ ವರ್ಗದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿ ಯಾವುದೇ ಲೋಪವಿಲ್ಲದಂತೆ ಆಚರಿಸಿ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉದಯ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.