ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ ಹಾಗೂ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಜನವರಿ 26 ರಿಂದ 30 ರವರೆಗೆ 5 ದಿನಗಳ ಕಾಲ ಮಂಡ್ಯ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದ ಆಕರ್ಷಣೀಯನ್ನು ಕಂಡು ಸಚಿವರು ಸಂತಸ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿ, ರಾಮಮಂದಿರದ ವಿನ್ಯಾಸ, ರಾಮಬಂಟ ಹನುಮ, ಚಂದ್ರಯಾನ-3, ಜ್ಞಾನಪೀಠ ಪುರಸ್ಕೃತರ ಚಿತ್ರಗಳು, ಸಿರಿಧಾನ್ಯದಲ್ಲಿ ನಿರ್ಮಿಸಿರುವ ಮಂಡ್ಯ ನಿತ್ಯ ಸಚಿವ ಕೆ.ವಿ ಶಂಕರೇಗೌಡ ಅವರ ಕಲಾಕೃತಿ ಸೇರಿದಂತೆ ವೈವಿಧ್ಯಮಯ ಅಲಂಕಾರಿಕ ಹೂಕುಂಡಗಳನ್ನು ವೀಕ್ಷಿಸಿದರು.
ಅರಣ್ಯ ಇಲಾಖೆಯ ಪಕ್ಷಿಧಾಮ, ಕೃಷಿ ಇಲಾಖೆಯ ಸುಗ್ಗಿ ಹಬ್ಬ, 20 ಸಾವಿರಕ್ಕೂ ಹೆಚ್ಚು ಹೂ ಬಳಸಿ ನಿರ್ಮಿಸಿರುವ ಕಲಕೃತಿಗಳು, ಹೂಕುಂಡುಗಳು ಸಸ್ಯಕಾಶಿ ಮಾದರಿಯಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿಂತಿವೆ. ನಾಡಿನ ಅನ್ನದಾತನ ಮಾದರಿ, ಎತ್ತಿನಗಾಡಿ, ಹಸು, ರೈತನ ಮಾದರಿಗಳು ಎಲ್ಲರ ಗಮನ ಸೆಳೆಯುತ್ತಿವೆ.
ಜನ ಸಾಮಾನ್ಯರು, ಪರಿಶಿಷ್ಟರ ಜಾತಿ,ವರ್ಗದ ಹಾಗೂ ಹಿಂದುಳಿದ ವರ್ಗಗಳ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಐದು ಗ್ಯಾರಂಟಿಗಳ ಪ್ರಾತ್ಯಕ್ಷಿಕೆ ವಿನೂತನ ಮಾದರಿಯಲ್ಲಿದ್ದು ಜನ ಸಾಮಾನ್ಯರು ಅದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಗಮನ ಸೆಳೆಯುತ್ತಿದ್ದಾರೆ.
ವಿವಿಧ ಇಲಾಖೆಗಳು ಜನ ಸಮಾನ್ಯರಿಗೆ ನೀಡುವ ಸೌಲಭ್ಯಗಳ ಬಗ್ಗೆ ವಸ್ತುಪ್ರದರ್ಶನ ಮಳಿಗೆಗಳು ಅನಾವರಣಗೊಳಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಮುಖ್ಯ ಕಾರ್ಯ ನಿರ್ವಾಹಕ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ರೂಪಶ್ರೀ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.