ಮಂಡ್ಯ ನಗರದಲ್ಲಿ ಆಪ್ಪೇ ಆಟೋಗಳ ಸಂಚಾರ ನಿರ್ಬಂಧಿಸಬೇಕು ಹಾಗೂ ಹೊಸ ಆಟೋಗಳಿಗೆ ಪರ್ಮಿಟ್ ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿ ಆಟೋ ಚಾಲಕರು ಮತ್ತು ಮಾಲೀಕರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜೀವ್ ಗಾಂಧಿ ಆಟೋ ಟ್ಯಾಕ್ಸಿ ಚಾಲಕರ ವೇದಿಕೆ ಆಶ್ರಯದಲ್ಲಿ ಆಟೋಗಳ ಸಂಚಾರ ಸ್ಥಗಿತ ಮಾಡಿ ಮುಷ್ಕರ ಮಾಡಿದ ಚಾಲಕರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಮೈಶುಗರ್ ವೃತ್ತದಿಂದ ಆಟೋಗಳ ಜೊತೆ ಮೆರವಣಿಗೆ ಹೊರಟ ಚಾಲಕರು,ಮಾಲೀಕರು ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ನಗರ ಪ್ರದೇಶದಲ್ಲಿ ಸಂಚರಿಸಲು ಆಪ್ಪೇ ಆಟೋಗಳಿಗೆ ಪರ್ಮಿಟ್ ಇಲ್ಲದಿದ್ದರೂ ನಗರದ ಹೊರವಲಯದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ನಗರ ಪ್ರವೇಶಿಸಿ ಸಂಚಾರ ಮಾಡುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ, ಹೊಗೆರಹಿತ ವಾಹನಗಳಾದ ಪೆಟ್ರೋಲ್, ಎಲ್ ಪಿ ಜಿ, ಸಿ ಎನ್ ಜಿ ಹಾಗೂ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಅವಕಾಶ ಇದ್ದರೂ ಸಹ ಅಧಿಕಾರಿಗಳು ಕಂಡರೂ ಕಾಣದಂತೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ಮಂಡ್ಯದಲ್ಲಿ ಸಾರ್ವಜನಿಕರ ವ್ಯಾಪ್ತಿಗೆ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಪರ್ಮಿಟ್ ನೀಡುತ್ತಿರುವುದ ರಿಂದ ಈಗಾಗಲೇ ಸಂಚರಿಸುತ್ತಿರುವ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ, ಅದೇ ರೀತಿ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಆಟೋ ನಂಬಿ ಬದುಕುತ್ತಿರುವವರಿಗೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ, ಇಂಧನ ಹಾಗೂ ಆಟೋ ಬಿಡಿ ಭಾಗಗಳ ಬೆಲೆ ಏರಿಕೆ ಆಗಿರುವುದರಿಂದ ಚಾಲಕರ ಸಂಕಷ್ಟ ಹೇಳತೀರದಾಗಿದೆ ಎಂದು ಹೇಳಿದರು.
ಸಾರಿಗೆ ಅಧಿಕಾರಿಗಳ ನಿರ್ಲಕ್ಷದಿಂದ ಆಟೋ ಚಾಲಕರ ಮತ್ತಷ್ಟು ಸಂಕಷ್ಟಕ್ಕಿಡಾಗುತ್ತಿದ್ದು,ಆಪ್ಪೇ ಆಟೋಗಳಿಗೆ ಮಂಡ್ಯ ನಗರ ಪ್ರವೇಶ ನಿರ್ಬಂಧಿಸಬೇಕು, ಈಗಾಗಲೇ ಹೆಚ್ಚಿನ ಪ್ರಮಾಣದ ಆಟೋಗಳು ಸಂಚಾರ ಮಾಡುತ್ತಿರುವುದರಿಂದ ಮುಂದಿನ ಐದು ವರ್ಷಗಳ ಕಾಲ ಯಾವುದೇ ಹೊಸ ಆಟೋಗಳಿಗೆ ಪರ್ಮಿಟ್ ನೀಡಬಾರದು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಕೆ.ಆರ್ ರವೀಂದ್ರ, ಅಧ್ಯಕ್ಷ ಟಿ.ಕೃಷ್ಣ, ಮುಖಂಡರಾದ ಎಂ ಎನ್ ಸತ್ಯನಾರಾಯಣ, ರವಿಕುಮಾರ್, ಎಂ. ರಾಜು,ಕೃಷ್ಣ, ನಾರಾಯಣ, ಸೈಯದ್ ನವಾಬ್ ಜಾನ್,ಕುಮಾರ್, ಗುರು ಶಂಕರ್, ಬೋರ ಲಿಂಗ, ಶಿವಕುಮಾರ್, ಎಚ್ ಸಿ ಮಹೇಶ್ ನೇತೃತ್ವ ವಹಿಸಿದ್ದರು.