ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ ಅವರ ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ಇಂದು ಬೆಳಿಗ್ಗೆ ಏಕಕಾಲದಲ್ಲಿ 6 ಕಡೆ ದಾಳಿ ನಡೆದಿದ್ದು ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮನೆ, ಕಚೇರಿ, ಕುಟುಂಬಸ್ಥರು, ಸಂಬಂಧಿಕರ ಮನೆಗಳ ಮೇಲೆಯೂ ದಾಳಿ ನಡೆದಿದೆ, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಮನೆ, ಮಂಡ್ಯದ ಕಚೇರಿ, ಮಾವನ ಮನೆ, ನಾಗಮಂಗಲದಲ್ಲಿರೋ ಫಾರ್ಮ್ ಹೌಸ್ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಮಂಡ್ಯ ಲೋಕಾಯುಕ್ತ ಎಸ್ ಪಿ ಸಜೀತ್ ನೇತೃತ್ವದಲ್ಲಿ ದಾಳಿ ನಡೆಸಿ ಮಂಡ್ಯನಗರದ ಕಲ್ಲಹಳ್ಳಿ 10 ನೇ ಕ್ರಾಸ್ ನಲ್ಲಿರುವ ಹರ್ಷನ ತಂದೆ ಮನೆ, ಮಂಡ್ಯದ PWD ಕಚೇರಿ, ಸರ್ಕಾರಿ ನಿವಾಸ, ನಾಗಮಂಗಲದ ಮಾವನ ಮನೆ ಹಾಗೂ ತೋಟದ ಮನೆ, ಬೆಂಗಳೂರು ಮನೆಗಳನ್ನು ಜಾಲಾಡಲಾಯಿತು.
ಹರ್ಷ ತಂದೆ ಹೆಚ್.ಎಸ್.ರಾಮಲಿಂಗಯ್ಯ ಎಇಇ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದರು. ರಾಮಲಿಂಗಯ್ಯ ವಾಸವಿರುವ ಮಂಡ್ಯದ ಕಲ್ಲಹಳ್ಳಿ ಮನೆ ಮೇಲೆ ದಾಳಿ ನಡೆದಿದೆ. ಮನೆ ಸದಸ್ಯರ ಪೋನ್ ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿ, ಹಣ, ಚಿನ್ನಾಭರಣ, ಆಸ್ತಿ ಪತ್ರಗಳ ಪರಿಶೀಲನೆ ನಡೆಸಿದರು.
ಹರ್ಷ ಮೇಲೆ ಸಾಲು ಸಾಲು ಭ್ರಷ್ಟಚಾರದ ಆರೋಪಗಳಿವೆ, ತುಂಡು ಗುತ್ತಿಗೆ ಮೂಲಕ ಬಾರಿ ಭ್ರಷ್ಟಚಾರ,
ಕಾಮಗಾರಿಯಲ್ಲಿ ಕಮಿಷನ್ ಸೇರಿ ಹಲವು ಆರೋಪಗಳು ಕೇಳಿಬಂದಿದ್ದವು. ಕೆಲವು ವರ್ಷಗಳಿಂದಲೂ ಈತನ ವಿರುದ್ದ ಲೋಕಾಯುಕ್ತ ಸೇರಿದಂತೆ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿತ್ತು. ಹರ್ಷನ ವಿರುದ್ದ ಪ್ರಧಾನಿ ನರೇಂದ್ರ ಮೋದಿಗೂ ದೂರು ಸಲ್ಲಿಕೆಯಾಗಿತ್ತು.