ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ ಎಂ.ಪಿ.ಎಂ.ಸಿ.ಆವರಣದಲ್ಲಿ ಕೊಬ್ಬರಿ ಕೇಂದ್ರವನ್ನು ತೆರೆದು ರೈತರ ಕೊಬ್ಬರಿಗಳನ್ನು ನೋಂದಣಿ ಮಾಡದೆ ದಳ್ಳಾಳಿಗಳು ಮತ್ತು ರಾಜಕಾರಣಿಗಳ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು ಕೇವಲ ಎರಡೇ ದಿನದಲ್ಲಿ ಖರೀದಿ ಕೇಂದ್ರದ ಬಾಗಿಲು ಮುಚ್ಚಿಡುವ ಅಧಿಕಾರಿಗಳ ವಿರುದ್ಧ ಸೋಮವಾರ ಮೂಲ ರೈತಸಂಘದ ಕಾರ್ಯಕರ್ತರು ನಾಗಮಂಗಲ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಿಂದ ತಾಲೂಕು ಕಚೇರಿ ಆವರಣದವರೆಗೆ ಮೆರವಣಿಗೆ ಮೂಲಕ ಸಾಗಿದ ರೈತರು, ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಲ್. ಸುರೇಶ್ ಮಾತನಾಡಿ, ಕೊಬ್ಬರಿ ಖರೀದಿ ಕೇಂದ್ರದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ, ನೋಂದಣಿ ಮಾಡಿದ ಇಬ್ಬರೂ ಅಧಿಕಾರಿಗಳನ್ನು ಈ ತಕ್ಷಣ ಅಮಾನತು ಮಾಡಬೇಕು. ಪ್ರಸ್ತುತ ನಡೆದಿರುವ ನೋಂದಣಿಯನ್ನು ರದ್ದು ಮಾಡಿ, ರೈತರ ಕೊಬ್ಬರಿ ಖರೀದಿಗೆ ಮರು ನೋಂದಣಿ ಮಾಡಬೇಕು, ಈ ಕುರಿತು ಕ್ರಮ ಕೈಗೊಳ್ಳದಿದ್ದರೆ ಕೊಬ್ಬರಿ ಖರೀದಿಯನ್ನು ತಡೆ ಹಿಡಿಯುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಖಂಜಾಚಿ ಬೋರೇಗೌಡ ಮಾತನಾಡಿ, ನೆಪಮಾತ್ರಕ್ಕೆ ಖರೀದಿ ಕೇಂದ್ರವನ್ನು ಪ್ರಾರಂಭಿಸಿ, ರಾಜಕಾರಣಿಗಳು ಮತ್ತು ದಲ್ಲಾಳಿಗಳ ಮನೆ ಮನೆಗೆ ಹೋಗಿ ನೋಂದಣಿ ಮಾಡಿದ್ದಾರೆ. ಈ ಅಕ್ರಮವನ್ನು ನಾವು ಖಂಡಿಸುತ್ತೇವೆ, ರೈತರನ್ನು ನ್ಯಾಯ ಬದ್ಧವಾಗಿ ನೋಂದಣಿ ಮಾಡಿ ಕೊಬ್ಬರಿ ಖರೀದಿಸಬೇಕೆಂದು ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಮೂಲ ರೈತರ ಸಂಘಟನೆ ಗೌರವಾಧ್ಯಕ್ಷ ರಾಜಣ್ಣ, ಹೋಬಳಿ ಅಧ್ಯಕ್ಷ ತಿಮ್ಮೇಗೌಡ, ಸಿದ್ದಲಿಂಗಯ್ಯ, ಕಿರಣ್, ಚಿಕ್ಕೇಗೌಡ, ಪುಟ್ಟೇಗೌಡ ಮತ್ತಿತರರು ಭಾಗವಹಿಸಿದ್ದರು.