ಭ್ರಷ್ಟಾಚಾರ, ಸೃಜನಪಕ್ಷವಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ, ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸುವಂತೆ ಜಾಗೃತಿ ಮೂಡಿಸಲಿ ಫೆ.19ರಿಂದ ಮಾ.2ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಜನಜಾಗೃತಿ ಜಾಥಾ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಲಿರುವ ಈ ಜಾಥಾದ ನೇತೃತ್ವವನ್ನು KRS ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ವಹಿಸಲಿದ್ದಾರೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಕರ್ನಾಟಕಕ್ಕಾಗಿನಾವು ಬೈಕ್ ಜಾಥಾ ಸಂಚರಿಸಲಿದೆ. 29 ಜಿಲ್ಲಾ ಕೇಂದ್ರಗಳು ಮತ್ತು ಐವತ್ತಕ್ಕಿಂತ ಹೆಚ್ಚು ತಾಲ್ಲೂಕು ಕೆಂದ್ರಗಳು ಸೇರಿದಂತೆ ಸುಮಾರು 82 ಪಟ್ಟಣ, ನಗರಗಳಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.2ರಂದು ಶನಿವಾರ, ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ನಡೆಯಲಿದೆ ಎಂದರು.
KRS ಪಕ್ಷವು ಈ ಹಿಂದೆ 2021ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ “ಭ್ರಷ್ಯರೇ, ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ, ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ” ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ರಾಜ್ಯದ ಸುಮಾರು 63 ತಾಲ್ಲೂಕು ಕಚೇರಿಗಳಲ್ಲಿ ಮಾಡಿದ್ದ “ಲಂಚಮುಕ್ತ ಕರ್ನಾಟಕ” ಅಭಿಯಾನದ ಮೂಲಕ ಜನರಿಗೂ ಹತ್ತಿರವಾಗಿತ್ತು. ಆ ಜಾಥಾದ ಕಾರಣದಿಂದ ಸಾವಿರಾರು ಜನ ಪಕ್ಷದ ಸದಸ್ಯತ್ವ ಪಡೆದರು, ನೂರಾರು ಜನ ನಾಯಕತ್ವದ ಜವಾಬ್ದಾರಿ ತೆಗೆದುಕೊಂಡರು, ನೂರಾರು ಸಾರ್ವಜನಿಕರು ದೇಣಿಗೆ ನೀಡಿದರು. ಪಕ್ಷಕ್ಕೆ, ಬಲ ತುಂಬಿದರು ಎಂದು ವಿವರಿಸಿದರು.
ಗೋಷ್ಟಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ, ಮುಖಂಡರಾದ ಚಂದ್ರು ಕೀಲಾರ, ರವೀಂದ್ರ ಕೊತ್ತತ್ತಿ ಹಾಗೂ ಜಗದೀಶ್ ಉಪಸ್ಥಿತರಿದ್ದರು.