ಮಂಡ್ಯ ಜಿಲ್ಲೆಯ ಮೈಷುಗರ್ ಕಂಪನಿಯ ಯಂತ್ರೋಪಕರಣಗಳು ತುಂಬಾ ಹಳೆಯದಾಗಿರುವ ಕಾರಣ ಅತ್ಯಾಧುನಿಕವಾದ ಹೊಸ ಮಿಲ್ ಗಳನ್ನು ಅಳವಡಿಕೆಗೆ ಮುಂದಾಗಿರುವುದು ಸ್ವಾಗತಾರ್ಹ, ಅದರ ಜೊತೆಗೆ ಹೇಮಾವತಿ ಅಚ್ಚುಕಟ್ಟು ಪ್ರದೇಶವಾದ ಮಂಡ್ಯ ಜಿಲ್ಲೆಯ ಮೇಲುಕೋಟೆ, ದುದ್ದ, ಬಸರಾಳು, ನಾಗಮಂಗಲ, ಆತಗೂರು ಪ್ರದೇಶಗಳಲ್ಲಿ ಕನಿಷ್ಠ ಅರೆಖುಷ್ಠಿ ಬೆಳೆ ಬೆಳೆಯಲು ನೀರು ಹರಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಭಾಗದ ನಾಲೆಗಳನ್ನುಆಧುನಿಕರಿಸಿ ನೀರು ಹರಿಸಬೇಕು. ಇಲ್ಲವೇ..ಏತ ನೀರಾವರಿ ಘಟಕಗಳ (ಲಿಪ್ಟ್ ಇರಿಗೇಷನ್) ಮೂಲಕವಾದರೂ ಈ ಬಾಗಕ್ಕೆ ನೀರು ಕೊಡಲು ರಾಜ್ಯ ‘ಬಜೆಟ್’ ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಘಟಿಸುತ್ತಿರುವ ಕಾರಣ ಮತ್ತು ಮಂಡ್ಯ ಜಿಲ್ಲೆಯ ಜನತೆಯ ಉತ್ತಮ ಆರೋಗ್ಯ ಸೇವೆಗಾಗಿ ಮಂಡ್ಯದಲ್ಲಿ ಮಲ್ಟಿ ಸ್ಪೆಸಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು. ಮಂಡ್ಯ ನಗರದ ಕೇಂದ್ರ ಸ್ಥಾನದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗಾಗಿ 5 ಕೋಟಿ ರೂಗಳ ಅನುದಾನವನ್ನು ಘೋಷಿಸಬೇಕೆಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ, ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತಿಸಿ ಗ್ರಾಮೀಣ ಜನರ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಮುಂದಾಗಬೇಕು. ಮಂಡ್ಯದಲ್ಲಿ ಬೃಹತ್ ಬುದ್ಧ ವಿಹಾರ ನಿರ್ಮಾಣಕ್ಕಾಗಿ 25 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು ಎಂಬ ಒತ್ತಾಯಿಸಿದರು.
ಗೋಷ್ಠಿಯಲ್ಲಿ ದಸಂಸ ಮುಖಂಡರಾದ ಅನಿಲ್ ಕುಮಾರ್, ಕೆ.ಎಂ.ಶ್ರೀನಿವಾಸ್, ಸೋಮಶೇಖರ್ , ಆನಂದ್ ಮತ್ತಿತರರು ಉಪಸ್ಥಿತರಿದ್ದರು.