ಬರುವ ಫೆ.27ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 5ನೇ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಪರ ಮತಚಲಾಯಿಸುವಂತೆ ಜೆಡಿಎಸ್ ಪಕ್ಷದ ನಾಯಕರು ಹಾಗೂ ಮುಖಂಡರು, ಮೂವರು ಪಕ್ಷೇತರ ಶಾಸಕರಿಗೆ ಹಣದ ಆಮಿಷವೊಡ್ಡಿ, ಬೆದರಿಕೆಯಾಕಿದ್ದಾರೆಂದು ಮಂಡ್ಯ ಶಾಸಕ ರವಿಕುಮಾರ್ ಗಣಿಗ ಆರೋಪಿಸಿದ್ಧಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಹಾಗೂ ಗೌರಿ ಬಿದನೂರು ಶಾಸ ಕೆ.ಹೆಚ್.ಪುಟ್ಟಸ್ವಾಮಿ ಅವರಿಗೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕಿದ್ದು, ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿವೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಾಗಿದೆ ಎಂದು ತಿಳಿಸಿದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು ಮಗನ ಮೊಬೈಲ್ ಗೆ 37 ಕ್ರಸೆಂಟ್ ಹೋಟೇಲ್ ಮಾಲೀಕ ರವಿ ಎಂಬ ವ್ಯಕ್ತಿ ಕರೆ ಮಾಡಿ, ಬೆದರಿಕೆ ಆಗಿದ್ಧಾರೆ. ರಾಜ್ಯಸಭೆಯ ಜೆಡಿಎಸ್ ಅಭ್ಯರ್ಥ ಕುಪ್ಪೆಂದ್ರರೆಡ್ಡಿ ಅವರ ಮಗನೂ ಕರೆ ಮಾಡಿ ಬೆದರಿಕೆ ಹಾಕಿದ್ಧಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ 10 ಕೋಟಿ ರೂ.ಗಳ ಹಣದ ಆಮಿಷವೊಡ್ಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದಲ್ಲಿ ಒಟ್ಟು 136 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಮೂವರು ಪಕ್ಷೇತರ ಶಾಸಕರು ತಮ್ಮ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಸಹ ಸದಸ್ಯರೇ ಆಗಿದ್ದಾರೆ. ಇವರಷ್ಟೇ ಅಲ್ಲದೇ ಕಾಂಗ್ರೆಸ್ ಶಾಸಕರಿಗೂ ಆಮಿಷವೊಡ್ಡಿರುವ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿದ್ದು, ಅದನ್ನು ಪೊಲೀಸರಿಗೆ ನೀಡಲಿದ್ದೇನೆ, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.