ನಮಗೆ ಗಣಿಗಾರಿಕೆಗಿಂತ ಕನ್ನಂಬಾಡಿ ಅಣೆಕಟ್ಟೆಯೇ ಮುಖ್ಯವಾಗಬೇಕು.ಕೈಕುಳಿ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ನೀಡಿ ದೊಡ್ಡ ಕ್ರಷರ್ ಗಳನ್ನು ಮುಚ್ಚಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ಗೆ ಹೈಕೋರ್ಟ್ ಅನುಮತಿ ನೀಡಿದೆ. ಈ ವಿಚಾರದಲ್ಲಿ ಸ್ವಲ್ಪ ಗೊಂದಲವಾಗುತ್ತಿದೆ. ನನ್ನ ಉದ್ದೇಶ ಕೈಕುಳಿಗಳನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಎಂಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅವಕಾಶ ಸಿಗಬೇಕು. ನಮ್ಮ ತಂದೆಯವರು ಕೂಡ ಕೈಕುಳಿ ಕೆಲಸ ಮಾಡುವವರ ಪರ ಹೋರಾಟ ಮಾಡಿದ್ದರು.ದೊಡ್ಡ ಕ್ರಷರ್ ಗಳನ್ನು ಮುಚ್ಚಿಸಬೇಕು.ಅವರೇ ದೊಡ್ಡ ಮಟ್ಟದ ಬ್ಲಾಸ್ಟ್ ಮಾಡುವುದು. ದೊಡ್ಡಮಟ್ಟದ ಬ್ಲಾಸ್ಗೆ ನನ್ನ ವಿರೋಧವಿದೆ ಎಂದರು.
ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿದರೆ ಹೇಗೆಂಬ ಬಗ್ಗೆ ನನಗೂ ಆತಂಕವಿದೆ. ಯಾರಾದರೂ ಬ್ಲಾಸ್ಟ್ ಮಾಡಲು ಬಂದರೇ ನಾನೇ ಮೊದಲು ತಡೆಯಲು ಮುಂದೆ ನಿಲ್ಲುತ್ತೇನೆ. ಈ ವಿಚಾರದಲ್ಲಿ ಯಾರಿಗೂ ಹೆದರುವುದಿಲ್ಲ.ನಮಗೆ ಕೆಆರ್ಎಸ್ ಅಣೆಕಟ್ಟೆ ಮುಖ್ಯವೇ ಹೊರತು ಗಣಿಗಾರಿಕೆ ಅಲ್ಲ. ಇನ್ನು ಗಣಿ ಮಾಲೀಕರಿಗೂ ಕೂಡ ಕೆಆರ್ಎಸ್ ಡ್ಯಾಂ ನಮ್ಮದು ಎಂಬ ಮನೋಭಾವನೆ ಬರಬೇಕು ಎಂದರು.
ರೈತರು ಕಾರಿನಲ್ಲಿ ಓಡಾಡಬಾರದಾ!
ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಬಗ್ಗೆ ಸಂಸದ ಅನಂತ್ಕುಮಾರ್ ಹೆಗಡೆ ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸುತ್ತೇನೆ.. ಮಾತನಾಡಿದ್ದಾರೆ. ಅವರು ಬಡ ರೈತರು ಕಾರಿನಲ್ಲಿ ಬರುತ್ತಿದ್ದಾರೆ ಎನ್ನುತ್ತಾರೆ. ಹಾಗಾದರೆ ರೈತರು ಕಾರಿನಲ್ಲಿ ಓಡಾಡಬಾರದಾ?ರೈತರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅಲ್ಲಿಗೆ ಹೋಗಿ ಹೋರಾಟ ಮಾಡಬೇಕು ಅಂದರೆ ಹೋಗುತ್ತೇವೆ. ಆದ್ದರಿಂದ ಅವರ ಹೇಳಿಕೆಗೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.
ಹೋರಾಟದಲ್ಲಿ ಯಾರೂ ಖಲಿಸ್ತಾನಿಗಳಿಲ್ಲ, ಎಲ್ಲರೂ ರೈತರು. ಈ ಹಿಂದೆ ಒಂದು ವರ್ಷ ಹೋರಾಟ ಮಾಡಿದ್ದಾರೆ. ರೈತರು ದುಡ್ಡು ಮಾಡಬಾರದಾ, ರೈತರು ಅಂದರೆ ಬಡವರು ಎಂಬುದು ತಲೆಯಲ್ಲಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆದರಿಕೆ-ಆಮಿಷ ಬಂದಿಲ್ಲ
ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರರೆಡ್ಡಿಯಿಂದ ಪಕ್ಷೇತರ ಶಾಸಕರಿಗೆ ಆಮಿಷ, ಬೆದರಿಕೆ ಬಂದಿದೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆರೋಪವನ್ನು ತಿರಸ್ಕರಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ,ನನಗೆ ಯಾವ ಬೆದರಿಕೆ,ಆಮಿಷ ಬಂದಿಲ್ಲ ಎಂದರು.
ನಾನೇನು ಗನ್ಮ್ಯಾನ್ ಕರೆದುಕೊಂಡು ಓಡಾಡ್ತಿದ್ದೀನಾ? ನನಗೆ ಯಾವ ಬೆದರಿಕೆಯನ್ನೂ ಹಾಕಿಲ್ಲ, ನನಗೆ ಹೆದರಿಕೆಯೂ ಇಲ್ಲ. ಜತೆಗೆ ಹಣದ ಆಮಿಷವನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂದರೆ ಮತವನ್ನು ಕೇಳುವುದು.ಅದರಲ್ಲಿ ಏನು ತಪ್ಪಿದೆ? ನಾನು ಯಾವುದೇ ಆಮಿಷಕ್ಕೆ ತಲೆಕೆಡಿಸಿಕೊಳ್ಳಲ್ಲ. ಜತೆಗೆ ನನಗೆ ಯಾವ ಒತ್ತಡವೂ ಇಲ್ಲ ಎಂದರು.