ಕಾವೇರಿ ಉಳಿವಿಗಾಗಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಸೋಮವಾರ ಐದನೇ ವಾರದ ಹೋರಾಟ ನಡೆಸಿತು, ಈ ಸಂದರ್ಭದಲ್ಲಿ ರೈತ ಮುಖಂಡರು, ಸಂಕಷ್ಟ ಪರಿಸ್ಥಿತಿಯಲ್ಲಿ ರೈತರ ಹಿತ ಕಾಪಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಣಗುತ್ತಿರುವ ಬೆಳೆ ರಕ್ಷಣೆ ಮತ್ತು ಜನ -ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ರೈತಸಂಘದ ಮುಖಂಡ ಇಂಡುವಾಳು ಚಂದ್ರಶೇಖರ್ ಮಾತನಾಡಿ, ತಮಿಳುನಾಡಿಗೆ ನೀರು ಹರಿಸಬೇಡಿ ಇಲ್ಲಿನ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದೆವು. ಆದರೂ ಸಹ ರೈತರ ಹೋರಾಟ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟ ಪರಿಣಾಮ ಕೆ ಆರ್ ಎಸ್ ನಲ್ಲಿ ನೀರು ಇಲ್ಲದೆ ಸಂಕಷ್ಟ ಪಡುವಂತಾಗಿದೆ, ಜಮೀನಿನಲ್ಲಿರುವ ಬೆಳೆಗಳು ಒಣಗುತ್ತಿವೆ, ಕೆರೆ ಕಟ್ಟೆಗಳು ನೀರಿಲ್ಲದೆ ಸೊರಗಿವೆ, ಜನ ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ, ಮುಖ್ಯಮಂತ್ರಿ ಮಾತು ಕೊಟ್ಟಂತೆ ನಾಲೆಗಳಿಗೆ ನೀರುಹರಿಸಬೇಕು ಎಂದು ಒತ್ತಾಯಿಸಿದರು.
ಮೈಶುಗರ್ ಕಾರ್ಖಾನೆಯ ಮಿಲ್ ಪ್ರತಿನಿತ್ಯ 5000 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ, ಕಾರ್ಖಾನೆ ನಡೆಯುವಾಗ ಸರಿಯಾಗಿ ಕಬ್ಬು ಸರಬರಾಜು ಮಾಡಲು ಶಾಸಕರು ಕಾಳಜಿ ತೋರಲಿಲ್ಲ,ಕಾರ್ಖಾನೆ ನಿಂತು ಮೂರು ತಿಂಗಳಾಗಿದೆ, ಜೂನ್ ವೇಳೆಗೆ ಕಾರ್ಖಾನೆಯಲ್ಲಿ ಕಬ್ಬು ಅರೆತ ಪ್ರಾರಂಭಿಸಬೇಕು, ಇದರ ಬಗ್ಗೆ ಚಿಂತಿಸದೆ ಹೊಸ ಕಾರ್ಖಾನೆ ಅವಶ್ಯಕತೆ ಇಲ್ಲದಿದ್ದರೂ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ದಸಂಸ ಎಂ. ವಿ ಕೃಷ್ಣ, ಕೆಂಪೇಗೌಡ, ನಾರಾಯಣಸ್ವಾಮಿ, ಶಿವಲಿಂಗಯ್ಯ, ಇಂಡು ವಾಳು ಬಸವರಾಜ್ ಮತ್ತು ಎಂ ಎಲ್ ತುಳಸಿಧರ್, ಉಪಸ್ಥಿತರಿದ್ದರು.