ಮಂಡ್ಯ ತಾಲ್ಲೂಕಿನ ಸಂಪಳ್ಳಿ ಗ್ರಾಮದ ಸರ್ವೇ ನಂ.129ರಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ಹಂಚಿಕೆ ಮಾಡಿ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿಗೆ ತೆರಳಿ ಹಕ್ಕು ಪತ್ರ ನೀಡಿ ಇಲ್ಲದಿದ್ದರ ಜೈಲಿಗೆ ಕಳುಹಿಸಿ ಎಂದು ಅನಿರ್ದಿಷ್ಟ ಧರಣಿ ಆರಂಭಿಸಿದರು.
ಸಂಪಳ್ಳಿ ವಾಸಿಗಳು 94/ಸಿ ಅಡಿಯಲ್ಲಿ ಮಂಡ್ಯ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದ್ದರೂ ಸಹ ತಹಸೀಲ್ದಾರ್ ಇಲ್ಲಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪಳ್ಳಿ ಗ್ರಾಮದ ಸರ್ವೆ ನಂ. 129ರಲ್ಲಿವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು, ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರಸ್ತೆ,ಚರಂಡಿ,ಸ್ಮಶಾನ ಸೇರಿದಂತೆ ಇತರೆ ಮೂಲ ಸೌಕರ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಬರ ಪರಿಸ್ಥಿತಿಯಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು,ತುರ್ತಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ಕೂಲಿಕಾರರ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಬೇಕು, ಹದಗೆಟ್ಟಿರುವ ರಸ್ತೆ, ದುರಸ್ತಿಗೊಳಿಸಬೇಕು, ಬರಗಾಲದಲ್ಲಿ ಉದ್ಯೋಗ ನೀಡಿ ಜನರ ಬದುಕು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಡಿ ಹನುಮೇಶ್, ಅಮಾಸಯ್ಯ, ಆರ್ ರಾಜು, ಸಂತೋಷ ಎಂ.ಎಸ್, ಸಿಐ ಟಿಯುನ ಸಿ.ಕುಮಾರಿ,ರಾಜೇಶ್ವರಿ, ಸಂತೋಷ್, ಮಂಜುಳ ನೇತೃತ್ವ ವಹಿಸಿದ್ದರು.