ವಿಪಕ್ಷಗಳ ‘ಇಂಡಿಯಾ’ ಒಕ್ಕೂಟವು ನಾಲ್ಕು ಹಂತಗಳಲ್ಲೂ ನಡೆದಿರುವ ಲೋಕಸಬಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಲಖನೌದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಉಪಸ್ಥಿತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ,ಆಡಳಿತ ಪಕ್ಷ ಮತದಾರರನ್ನು ಮತ ಹಾಕಲು ಹಾಗೂ ಅಭ್ಯರ್ಥಿಗಳನ್ನು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಬೆದರಿಸುತ್ತಿದೆ ಎಂದು ಆರೋಪಿಸಿದರು.
ಬೆದರಿಸುವಿಕೆಯ ನಡುವೆಯೂ ಇಂಡಿಯಾ ಒಕ್ಕೂಟ ನಾಲ್ಕು ಲೋಕಸಭಾ ಹಂತಗಳಲ್ಲಿಯೂ ಬಿಜೆಪಿಗಿಂತ ಮುಂದಿದೆ. ಆಡಳಿತ ಪಕ್ಷದವರು ನಮಗಿಂತ ಹಿಂದಿದ್ದಾರೆ. ಕೇಂದ್ರದಲ್ಲಿ ನಾವು ಮುಂದಿನ ಸರ್ಕಾರವನ್ನು ರಚಿಸುತ್ತೇವೆ ಎಂದು ಖರ್ಗೆ ಹೇಳಿದರು.
ಪ್ರಸ್ತುತ ನಡೆಯುತ್ತಿರುವ ಚುನಾವಣೆಯು ಸಿದ್ಧಾಂತಗಳ ನಡುವಿನ ಕದನವಾಗಿದೆ. ಒಂದು ಕಡೆ ಧರ್ಮದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದಿದ್ದರೆ, ಮತ್ತೊಂದು ಕಡೆ ಬಡವರು ಹಾಗೂ ಯುವಕರ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ. ನಮ್ಮ ಹೋರಾಟವು ಸಂವಿಧಾನವನ್ನು ಉಳಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೀಸಲಾತಿ ರದ್ದುಗೊಳಿಸಿ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತನ್ನು ಉಲ್ಲೇಖಿಸಿದರು. ಮೋದಿ ಎಂದಿಗೂ ಇಂತಹ ನಾಯಕರ ಹೇಳಿಕೆಗಳನ್ನು ವಿರೋಧಿಸುವುದಿಲ್ಲ ಎಂದು ಹೇಳಿದರು.
“ನಾವು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಸ್ಥಾನಮಾನವನ್ನು ಖಚಿತಪಡಿಸಲು ಜಾತಿ ಸಮೀಕ್ಷೆಯನ್ನು ಕೈಗೊಳ್ಳುತ್ತೇವೆ. ಅದು ನಮ್ಮ ಪಕ್ಷದ ಪ್ರಮುಖ ಕಾರ್ಯಸೂಚಿಯಾಗಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕಿಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಈ ಕಾರ್ಯವನ್ನು ನಾವು ಈಗಾಗಲೇ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ನೆರವೇರಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 140ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ. ಅದೇ ರೀತಿ ಬಿಎಸ್ಪಿಗೆ ಮತ ನೀಡಿ ತಮ್ಮ ಮತವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.