ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರ ಯಾರಿಗೆ ತಾನೇ ಗೊತ್ತಿಲ್ಲ. ಹಲವು ದಶಕಗಳಿಂದ ಗಾಂಧಿ ಮನೆತನದ ಜನರನ್ನು ದೆಹಲಿಗೆ ಕಳುಹಿಸಿದ ಕ್ಷೇತ್ರ ಅಮೇಥಿ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸಹ ಪ್ರಧಾನಿ ಮೋದಿಜೀ ಅವರ ಕ್ಯಾಬಿನೆಟ್ ನ ಪ್ರಭಾವಿ ಮಂತ್ರಿ ಸ್ಮೃತಿ ಹಿರಾನಿ ಸೋಲಿಸಿದ ಕ್ಷೇತ್ರ ಅಮೇಥಿ.
ಆದರೆ 2024 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ವಿಶೇಷ ಮತ್ತು ವಿಶಿಷ್ಟ ಕ್ಷೇತ್ರವಾಗಿ ದೇಶದ ಜನರ ಗಮನ ಸೆಳೆದಿದೆ. ರಾಜೀವ್ ಗಾಂಧಿ ಕಾಲದಿಂದಲೂ ಸಹ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಪಿ.ಎ ಆಗಿ ಪರದೆಯ ಹಿಂದೆ ಕೆಲಸ ಮಾಡಿದ ಕಿಶೋರಿ ಲಾಲ್ ಶರ್ಮ ಅವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿದಾಗ ಕ್ಷೇತ್ರದ ಜನರು ಸೇರಿದಂತೆ ದೇಶದ ಜನರು ಹೌಹಾರಿದರು.
ಪ್ರತಿ ಚುನಾವಣೆಗಳಲ್ಲೂ ನಾಯಕರ ಹಿಂದೆ ನಿಂತು ಕೆಲಸ ಮಾಡುತ್ತಿದ್ದ ಕಿಶೋರಿ ಲಾಲ್ ಈ ಬಾರಿ ಸ್ವತಃ ನಾಯಕರಾಗಿ ನಿಂತಿರುವುದನ್ನು ಜನರು ನಂಬುವಷ್ಟರಲ್ಲಿ ಪ್ರಿಯಾಂಕ ಗಾಂಧಿ ಅವರು ಕಿಶೋರಿ ಲಾಲ್ ಅವರ ಜೊತೆ ಮಿಂಚಿನ ಸಂಚಾರ ಮಾಡಿ ಕ್ಷೇತ್ರದಲ್ಲಿಹೊಸ ಸಂಚಲನ ಮೂಡಿಸಿದ್ದು ಕೆಲವು ಮೂಲಗಳ ಪ್ರಕಾರ ಸ್ಮೃತಿ ಹಿರಾನಿ ಸೋಲಲಿದ್ದಾರೆ ಎಂಬ ಮಾಹಿತಿ ಇದೆ. ಮತ್ತೊಂದು ಮೂಲದ ಪ್ರಕಾರ ಇಬ್ಬರ ನಡುವೆ ತೀವ್ರ ಹಣಾಹಣಿ ನಡೆದಿದೆ ಎನ್ನುತ್ತಿದೆ. ಕಿಶೋರಿ ಲಾಲ್ ಗೆದ್ದರೆ ಚುನಾವಣಾ ಇತಿಹಾಸದಲ್ಲಿ ಹೊಸ ಆಧ್ಯಾಯ ಸೇರ್ಪಡೆಗೊಳ್ಳುವುದು ಖಚಿತ ಎಂದೇ ಹೇಳಲಾಗುತ್ತಿದೆ.