ನಾನು ಜೈವಿಕವಾಗಿ ಜನಿಸಿಲ್ಲ, ನನ್ನನ್ನು ಪರಮಾತ್ಮ ಕಳಿಸಿದ್ದಾನೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದೆಹಲಿಯ ದಿಲ್ಸಾದ್ ಗಾರ್ಡನ್ನಲ್ಲಿ ಪಕ್ಷದ ಅಭ್ಯರ್ಥಿ ಕನ್ನಯ್ಯ ಕುಮಾರ್ ಪರ ಚುನಾವಣಾ ಪ್ರಚಾರ ಮಾಡಿದ ರಾಹುಲ್ ಗಾಂಧಿ, ನಾನು ಜೈವಿಕವಾಗಿ ಜನಿಸಿಲ್ಲ, ನನ್ನನ್ನು ಪರಮಾತ್ಮ ಕಳಿಸಿದ್ದಾನೆ ಎಂಬ ಪ್ರಧಾನಿ ಮೋದಿ ಹೆಳಿದ ಮಾತನ್ನು ಜನ ಸಾಮಾನ್ಯರು ಹೇಳಿದ್ದರೆ ಅವರನ್ನು ನೇರವಾಗಿ ಮನೋವೈದ್ಯರ ಬಳಿ ಕರೆದೊಯ್ಯುತ್ತಿದ್ದಿರಿ ಎಂದು ಹೇಳಿದರು.
“ದೇವರು ಕಳಿಸಿದ ವ್ಯಕ್ತಿ ಬಡವರಿಗಾಗಿ ಏನು ಮಾಡಿಲ್ಲ ಅವರು ಕೇವಲ 22 ಜನರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ. ಅಂಬಾನಿ, ಅದಾನಿ ಏಳಿಗೆಗಾಗಿ ಪ್ರಧಾನಿ ಮೋದಿ ಏನು ಬೇಕಾದರೂ ಮಾಡುತ್ತಾರೆ. ದೇಶದ ಎಲ್ಲ ಆಸ್ತಿಯನ್ನು ಅವರಿಗೆ ನೀಡಿದ್ದಾರೆ. ರೈಲ್ವೆ, ಬಂದರು, ವಿಮಾನ ನಿಲ್ದಾಣಗಳು ಇತರೆ ಎಲ್ಲವನ್ನು ಅದಾನಿಗೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಡವರು ಕೇಳಿದ್ದ ಸಾಲ ಮನ್ನ, ರಸ್ತೆಗಳು, ಆಸ್ಪತ್ರೆಗಳು, ಶಿಕ್ಷಣ ಮುಂತಾದ ಏನನ್ನು ನರೇಂದ್ರ ಮೋದಿ ಮಾಡಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದರು.
“ಬಿಜೆಪಿಯವರು ಯಾವಾಗಲು ಸಂವಿಧಾನವನ್ನು ಎಸೆಯಲು ಬಯಸುತ್ತಾರೆ. ಇದು ಸಾಮಾನ್ಯ ಪುಸ್ತಕವಲ್ಲ ಗಾಂಧಿ, ಅಂಬೇಡ್ಕರ್ ಹಾಗೂ ನೆಹರು ಅವರ ಸಾವಿರಾರು ವರ್ಷಗಳ ಸೈದ್ಧಾಂತಿಕ ಪರಂಪರೆಯನ್ನು ಹೊಂದಿರುವ ಸಂವಿಧಾನ. ಅವರು ನಮ್ಮ ಸಂವಿದಾನ ಅಥವಾ ಭಾರತದ ಬಾವುಟವನ್ನು ಒಪ್ಪಿಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ಇವುಗಳಲ್ಲವನ್ನು ಬದಲಿಸಲು ಬಯಸಿದ್ದಾರೆ” ಎಂದು ರಾಹುಲ್ ಹೇಳಿದರು.
“ನೀವು ಸಂವಿಧಾನವನ್ನು ಬದಲಿಸಲು ಧೈರ್ಯ ಮಾಡಬೇಡಿ ಎಂದು ನಾನು ಅವರಿಗೆ ಹೇಳ ಬಯಸುತ್ತೇನೆ. ನೀವು ಅಂತಹ ಪ್ರಯತ್ನ ಮಾಡಿದರೆ ಕೋಟ್ಯಂತರ ಭಾರತೀಯರ ಆಕ್ರೋಶಕ್ಕೆ ತುತ್ತಾಗುತ್ತೀರಿ” ಎಂದು ರಾಹುಲ್ ಬಿಜೆಪಿ ವಿರುದ್ಧ ಹರಿಹಾಯ್ದರು.
ದೆಹಲಿ ಒಳಗೊಂಡು 58 ಕ್ಷೇತ್ರಗಳಿಗೆ ಮೇ.25 ರಂದು 6ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂ.1 ರಂದು 7 ಹಂತದ ಮತದಾನ ನಡೆಯಲಿದ್ದು, ಜೂ.4 ರಂದು ಫಲಿತಾಂಶ ಹೊರಬೀಳಲಿದೆ.