ರಾಜ್ಯ ಸರ್ಕಾರದ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ 62ನೇ ಹುಟ್ಟುಹಬ್ಬವನ್ನು ನಾಳೆ (ಜೂ.1) ಮಂಡ್ಯನಗರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಚಲುವರಾಯಸ್ವಾಮಿ ಅವರ ಅಭಿಮಾನಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡಲಿದ್ದೇವೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 7.30 ಗಂಟೆಗೆ ಮಂಡ್ಯನಗರದ ವಿದ್ಯಾನಗರದ ಗಣಪತಿದೇವಸ್ಥಾನದಲ್ಲಿ ಸಚಿವ ಹೆಸರಿನಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಪಿ.ರಾಮು, ಕಾಂಗ್ರೆಸ್ ಮುಖಂಡ ಕಂಬದಹಳ್ಳಿ ಪುಟ್ಟಸ್ವಾಮಿ, ತಾಪಂ.ಅಧ್ಯಕ್ಷ ಮಾಜಿ ತ್ಯಾಗರಾಜು ರವರ ನೇತೃತ್ವದಲ್ಲಿ ಬರುವ ಕಾರ್ಯಕರ್ತರಿಗೆ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
9 ಗಂಟೆಗೆ ಮಂಡ್ಯ ಮಿಮ್ಸ್ ಆವರಣದ ಮಮತೆಯ ಮಡಿಲು ಆಶ್ರಯದಲ್ಲಿ ರೋಗಿಗಳಿಗೆ ಮತ್ತು ಅವರ ಪಾಲಕರಿಗೆ ಉಪಹಾರ, ಮದ್ಯಾಹ್ನನದ ಊಟ ಮತ್ತು ರಾತ್ರಿ ಊಟವನ್ನು ಉಚಿತವಾಗಿ ನೀಡಲಾಗುವುದು, ಮಿಮ್ಸ್ ಆಸ್ಪತ್ರೆಯಲ್ಲಿ 62 ಮಕ್ಕಳಿಗೆ ಬಟ್ಟೆಗಳನ್ನು ನೀಡಲಾಗುವುದು. ಹಾಗೂ 62 ತೆಂಗಿನ ಸಸಿ ವಿತರಿಸಲಾಗುವುದು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಗುವುದು ಎಂದರು.
ರಕ್ತದಾನ ಶಿಬಿರ
ಸಿ.ಎಂ.ದ್ಯಾವಪ್ಪ ಮತ್ತು ಅನಿಲ್ ಕುಮಾರ್ ನೇತೃತ್ವದಲ್ಲಿ ಮಿಮ್ಸ್ ನ ರಕ್ತನಿಧಿ ಕೇಂದ್ರದಲ್ಲಿ 62 ಕ್ಕೂ ಹೆಚ್ಚು ಜನ ರಕ್ತದಾನ ಮಾಡುವರು, ಕಾಂಗ್ರೆಸ್ ಮುಖಂಡ ಶಿವನಂಜು ರವರ ನೇತೃತ್ವ ದಲ್ಲಿ 9-30 ಗಂಟೆಗೆ ಸ್ವರ್ಣಸಂದ್ರದ ಪ್ರೇರಣ ಅಂಧ ಮಕ್ಕಳ ಶಾಲೆಯಲ್ಲಿ ಲಘು ಉಪಹಾರ ನೀಡಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮತ್ತು ಸಚಿವ ಚಲುವರಾಯಸ್ವಾಮಿ ಹಿತೈಷಿ ಬಳಗದ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ಗಾಂಧಿ ಭವನದಲ್ಲಿ 11 ಗಂಟೆಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕೆ.ದೀಪಕ್ ಮುಖ್ಯಭಾಷಣ ಮಾಡುವರು, ಈ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣ, ಮಹಮದ್ ಜಬೀ, ಉಮೇಶ್, ಮನೋಜ್, ಸುಧಾ ಹಾಗೂ ರೂಪ ಉಪಸ್ಥಿತರಿದ್ದರು.