ರಾಜ್ಯದ 28 ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದವರಿಗೆ ಹಾಗೂ ಆಪ್ತರಿಗೆ ಬಿ.ಫಾರಂ ಬೇಕೆಂದು ಪಟ್ಟು ಹಿಡಿದು ಅವರನ್ನು ಗೆಲ್ಲಿಸಿಕೊಂಡು ಬರಲು ವಿಫಲವಾದ ಒಂದು ಡಜನ್ ಕ್ಕಿಂತ ಹೆಚ್ಚು ಸಚಿವರ ತಲೆದಂಡ ಖಚಿತ ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ತಮ್ಮ ಮಕ್ಕಳಿಗೆ, ತಮಗೆ ಬೇಕಾದ ವ್ಯಕ್ತಿಗೆ ಟಿಕೆಟ್ ಪಡೆದು ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಹಲವು ಸಚಿವರು ವಿಫಲರಾಗಿದ್ದು, ಅವರಲ್ಲಿ ಯಾರ್ಯಾರು ಪದವಿ ಕಳೆದುಕೊಳ್ಳುತ್ತಾರೆಂಬ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದೆ.
ಕೋರ್ಟ್ನಲ್ಲಿ ಕೇಸ್ ಒಂದಕ್ಕೆ ಹಾಜರಾಗಲು ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದ್ದರು, ಈ ಸಂದರ್ಭದಲ್ಲಿ ಸೋಲಿಗೆ ಕಾರಣಗಳನ್ನು ಕೇಳಿದ್ದರು, ಆ ಸಮಯದಲ್ಲಿ ಬಹಳಷ್ಟು ಜನ ಮೈತ್ರಿಯಿಂದ ನಮಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ ಅವರು ಮೈತ್ರಿಯಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಸಚಿವಗಿರಿಗೆ ರಾಜೀನಾಮೆ ನೀಡಿ ಶಾಸಕರಾಗಿ ಕೆಲಸ ಮಾಡಿ ಎಂದು ಸೂಕ್ಷ್ಮವಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.