ಮಂಡ್ಯ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರು ನೂತನ ಸಚಿವರಾಗಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆಯುವುದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹುರುಪು ಬಂದಿದೆ.
ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಭಾರೀ ಅಂತರದಲ್ಲಿ ಸೋತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮಂಕು ಕವಿದಿದೆ.ಇನ್ನು ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಜೆಲ್ಲೆಯ ಚುನಾವಣಾ ಅಖಾಡದಲ್ಲಿ ಸೆಣಸಾಡುವುದು ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರೇ ಆಗಿರುತ್ತಾರೆ.ಬಿಜೆಪಿ ಕಾರ್ಯಕರ್ತರು ಕುಮಾರಸ್ವಾಮಿ ಹಿಂದೆ ನಿಂತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಷ್ಟೇ.
ಕೇಂದ್ರದಲ್ಲಿ ಮೋದಿಜೀ ಸರ್ಕಾರ ಅಲ್ಪಮತದಲ್ಲಿರುವುದರಿಂದ ಸದಾಕಾಲವೂ ಮೈತ್ರಿ ಪಕ್ಷಗಳ ನಂಬಿಕೊಂಡೇ ಕೆಲಸ ಮಾಡಬೇಕಾಗುತ್ತೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪ್ರಾಮುಖ್ಯತೆ ನೀಡುತ್ತದೆ ಹೊರತು ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ದುಸ್ಸಾಹಸ ಮಾಡುವುದಿಲ್ಲ.ಬಿಜೆಪಿ ನಗಣ್ಯ ವಾಗಿದ್ದು, ಇನ್ನೇನ್ನಿದ್ದರೂ ನಾವು ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ನವರಿಗೆ ಟಕ್ಕರ್ ಕೊಡುತ್ತಿದ್ದೇವೆ ಎಂಬ ಅಲ್ಪ ತೃಪ್ತಿಯಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಇರಬೇಕಾಗುತ್ತೆ.
ಆದರೆ ಮಂಡ್ಯ ಜಿಲ್ಲೆಯ ಬಹಳಷ್ಟು ನಾಯಕರುಗಳು ಜೆಡಿಎಸ್ ಪಕ್ಷದಲ್ಲಿ ತಮಗೆ ಸೂಕ್ತ ಸ್ಥಾನಮಾನ ಇಲ್ಲವೆಂದು ಬಿಜೆಪಿ ಸೇರಿಕೊಂಡು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದರು. ಈಗ ಅವರುಗಳಿಗೆ ಮಂಡ್ಯ ಜಿಲ್ಲೆಯಲ್ಲಿ ಸದ್ಯಕ್ಕೆ ಬಿಜೆಪಿಗೆ ಅವಕಾಶವಿಲ್ಲ ಎನ್ನುವುದು ಅರ್ಥವಾಗಿರುವುದರಿಂದ ಪುನಃ ಜೆಡಿಎಸ್ ಸೇರುತ್ತಾರಾ ಅಥವಾ ಬೇರೆ ದಾರಿ ಹಿಡಯುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.