Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ಕೆಲಸಗಳ ಮೂಲಕ ಮಂಡ್ಯದ ಜನರ ಋಣ ತೀರಿಸುವೆ: ಹೆಚ್‍.ಡಿ.ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯ ಜನರು ನನ್ನನ್ನು ಭಾರೀ ಬಹು ಮತಗಳಿಂದ ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಸಚಿವನನ್ನಾಗಿ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನರ ಋಣ ತೀರಿಸುತ್ತೇನೆ” ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ವೇಳೆ ಜಿಲ್ಲೆಯ ಗಡಿಭಾಗ ಮದ್ದೂರು ತಾಲ್ಲೂಕಿನ ನಿಡಘಟ್ಟದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಬಹುಮತದಿಂದ ಗೆಲ್ಲಿಸಿದ್ದೀರಿ. ಅದರಲ್ಲೂ ವಿಶೇಷವಾಗಿ ಮದ್ದೂರು ತಾಲ್ಲೂಕಿನ ಜನತೆ 56 ಸಾವಿರಕ್ಕೂ ಹೆಚ್ಚು ಬಹುಮತಗಳನ್ನು ನೀಡಿರುವುದನ್ನು ನಾನು ಎಂದೂ ಮರೆಯುವುದಿಲ್ಲ ಎಂದರು.

ಮಂಡ್ಯ ಜಿಲ್ಲೆಗೂ ನನಗೂ ಹಾಗೂ ನನ್ನ ತಂದೆಯವರಾದ ದೇವೇಗೌಡರಿಗೂ ವಿಶೇಷವಾದ ಅನುಬಂಧ ಹಿಂದಿನಿಂದಲೂ ಇದೆ. ಕಳೆದ ಚುನಾವಣೆಯಲ್ಲಿ ನಾನು ಚುನಾವಣೆಯಲ್ಲಿ ನಿಲ್ಲಲು ಒತ್ತಡವಿತ್ತು. ನರೇಂದ್ರ ಮೋದಿಯವರೇ ನಿಲ್ಲುವಂತೆ ಹೇಳಿದ್ದರು.ಅದಕ್ಕಾಗಿಯೇ ಅವರ ಸಂಪುಟದಲ್ಲಿ ಎರಡು ಇಲಾಖೆಗಳ ಖಾತೆ ಕೊಟ್ಟಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ದೇಶ ಹಾಗೂ ನನ್ನ ರಾಜ್ಯದ ರೈತರ ಸಮಸ್ಯೆಗಳನ್ನು ಬಗೆಹರಿಸುವ ಆಸೆ ನನ್ನದು. ಅಷ್ಟೇ ಅಲ್ಲದೇ ಯುವಕರಿಗೆ ಉದ್ಯೋಗಗಳನ್ನು ಕೊಡಿಸುವ ಜವಾಬ್ದಾರಿ ಇದೆ. ಸುಮಾರು 50 ವರ್ಷದಿಂದ ಜಿಲ್ಲೆಯು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇನೆ. ನನ್ನ ಬೆಳೆಸಿದ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸ್ವಲ್ಪ ಸಮಯ ಕೊಡಿ, ಇಲಾಖೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಪ್ರತಿ ಹಳ್ಳಿಗೆ ಬರುತ್ತೇನೆ. ವಾರದಲ್ಲಿ ಒಂದು ದಿನವಾದರೂ ಜಿಲ್ಲೆಗೆ ಬಂದು ನಿಮ್ಮ ಸೇವೆಯನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸಮಾಜದ ಒಳಿತಿಗೂ ಉತ್ತಮ ಕೆಲಸ ಮಾಡುತ್ತೇನೆ ಎಂದರು.

ನಿಖಿಲ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇನೆ. ನಿಮ್ಮ ಕಷ್ಟ-ಸುಖದಲ್ಲಿ ಅವರು ಭಾಗಿ ಯಾಗುತ್ತಾರೆ. ನಿಮ್ಮ ಋಣದ ಭಾರ ನಮ್ಮ ಮೇಲೆ ಇದೆ. ಕೊನೆಯವರೆಗೂ ನಿಮ್ಮ ಆಶೀರ್ವಾದ ಇರಲಿ ಎಂದರು.

ಮುಖ್ಯವಾಗಿ ಜಿಲ್ಲೆಗೆ ಕಾವೇರಿ ನೀರಿನ ವಿಷಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಪ್ರಧಾನಿಯವರ ಗಮನಕ್ಕೆ ತಂದು ನ್ಯಾಯ ಒದಗಿಸುವ ಕೆಲಸವನ್ನು ಮಾಡುವುದೇ ನನ್ನ ಪರಮ ಗುರಿಯಾಗಿದೆ ಎಂದರು.

ಅದ್ದೂರಿ ಸ್ವಾಗತ
ಕುಮಾರಸ್ವಾಮಿ ಅವರಿಗೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ನಿಡಘಟ್ಟದ ಬಳಿ
ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹಾರ ಹಾಕಿ, ಹೂ ಮಳೆ ಸುರಿಸಿ,ಅದ್ದೂರಿ ಸ್ವಾಗತ ನೀಡಿದರು.

ತೆರದ ವಾಹನದಲ್ಲಿ ನಿಡಘಟ್ಟದಿಂದ ಮದ್ದೂರು ಪಟ್ಟಣದವರೆಗೆ ಮೆರವಣಿಗೆ ನಡೆಸಲಾಯಿತು.

ಈ ವೇಳೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಜಿ.ಟಿ. ದೇವೇಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಸುರೇಶ್ ಗೌಡ, ಕೆ.ಅನ್ನದಾನಿ, ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಬಿಜೆಪಿ ಮುಖಂಡರಾದ ಎಸ್.ಪಿ. ಸ್ವಾಮಿ, ಡಾ.ಇಂದ್ರೇಶ್ ಸೇರಿದಂತೆ ಹಲವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!