ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್ ಸಭೆಯು ಮೂಡ ಅಧ್ಯಕ್ಷ ನಹಿಂ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಅಧ್ಯಕ್ಷ ನಹಿಂ ಅವರ ಅವಧಿಯ ಮೊದಲ ಸಭೆ ಇದಾಗಿದ್ದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಭೆ ನಡೆಸಿ ಬಜೆಟ್ ಅನ್ನು ಸರ್ವಾನುಮತದಿಂದ ಅನುಮೋದಿಸಲಾಯಿತು.
ಸಭೆಯ ನಂತರ ಮಾತನಾಡಿದ ಶಾಸಕ ಪಿ.ರವಿಕುಮಾರ್ ಗೌಡ ಗಣಿಗ, ವಿವೇಕಾನಂದ ನಗರದ ಅಭಿವೃದ್ದಿಗೆ ಸಾಲ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.ಸರ್ಕಾರ ಅನುಮತಿ ನೀಡಿದರೆ ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ಮೂಡ ಅಧ್ಯಕ್ಷ ನಹಿಂ ಮಾತನಾಡಿ, ಕೆಂಪೇಗೌಡರ ಜಯಂತಿಯಂದು ಮುಡಾ ಮೀಟಿಂಗ್ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕಳೆದ ಸಾಲಿನಲ್ಲಿ ಮುಡಾ 35ಲಕ್ಷ ರೂಪಾಯಿ ಆದಾಯಗಳಿಸಲಾಗಿದೆ. ಈಗಾಗಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮಂಡ್ಯದ ಅಭಿವೃದ್ದಿಗೆ 50 ಕೋಟಿ ರೂಪಾಯಿಗಳ ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಮುಡಾ ಆಯುಕ್ತರಾದ ಐಶ್ವರ್ಯ, ಮುಡಾ ನಿರ್ದೇಶಕರಾದ ದೊಡ್ಡಯ್ಯ , ಎಂ.ಕೃಷ್ಣ , ಕಾವ್ಯಶ್ರೀ ಸೋಮಶೇಖರ್, ಅರುಣ್ ಕುಮಾರ್ , ನಗರಸಭೆ ಎಇಇ ರವಿಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.