ಸೊಳ್ಳೆಗಳು ಬೆಳೆಯಲು ಪೂರಕವಾಗಿರುವ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದರಿಂದ ಡೆಂಘೀ ಯಿಂದ ದೂರವಿರಬಹುದೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ವಿದ್ಯಾಭಾರತಿ ಪಬ್ಲಿಕ್ ಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ “ಡೆಂಗಿ ನಿಯಂತ್ರಣ ಕುರಿತು” ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಿಂತ ಸ್ವಚ್ಛ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಬೆಳೆಯುತ್ತವೆ. ಹೀಗೆ ನಿಂತ ನೀರನ್ನು ಶುಚಿಗೊಳಿಸುವುದು ಪ್ರಮುಖವಾಗಿದೆ ಆಧುನಿಕ ಬದುಕಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ನಮ್ಮ ಅರಿವಿನ ಪರಿವಿಗೆ ಬರದಂತಹ ಎಡೆಗಳಲ್ಲಿ ನೀರು ನಿಂತು ಸೊಳ್ಳೆಗಳು ಬೆಳವಣಿಗೆ ಆಗುತ್ತವೆ ಎಂದು ಹೇಳಿದರು.
ಅಲಂಕಾರಿಕವಾಗಿ ಮನೆಯೊಳಗೆ ಬೆಳೆಯುವ ಸಸ್ಯಗಳ ಕುಂಡಗಳು, ಮನೆ ಹಿತ್ತಲಲ್ಲಿ ಎಸೆದಿರುವ ಹಳೆಯ ಪಾತ್ರೆ , ಮಡಕೆ, ಟೈರು, ಬಕೀಟು, ಪ್ಲಾಸ್ಟಿಕ್ ಕಪ್, ಎಳನೀರಿನ ಚಿಪ್ಪು ಮೊದಲಾದವುಗಳಲ್ಲಿ ಸೇರಿರುವ ನೀರು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ ಪ್ರಮುಖವಾಗಿ ಇಂತಹ ಸ್ಥಳಗಳಲ್ಲಿ ಸೊಳ್ಳೆಗಳು ಸಹಜವಾಗಿ ಬೆಳೆಯುತ್ತವೆ, ಹೀಗಾಗಿ ಈ ವಿಷಯದ ಬಗ್ಗೆ ಸಾಂಘೀಕ ಅರಿವು ಅಗತ್ಯವಾಗಿದೆ ಮಕ್ಕಳು ಈ ವಿಷಯಗಳನ್ನು ಪಾಲಕರಿಗೆ ತಿಳಿ ಹೇಳಿ ಎಲ್ಲರೂ ಎಚ್ಚರಿಕೆ ವಹಿಸಿ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಸೊಳ್ಳೆಗಳ ಬೆಳವಣಿಗೆ ಹಂತಗಳ ಕುರಿತು ಲಾರ್ವಾಗಳ ಪ್ರಾತ್ಯಕ್ಷಿಕೆ ಯೊಂದಿಗೆ ಹಾಗೂ ಕರ ಪತ್ರ ವಿತರಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ ಮಂಗಳ ಮಾತನಾಡಿ, ಡೆಂಘೀ ಜ್ವರದ ಲಕ್ಷಣಗಳು, ಮುಂಜಾಗ್ರತ ಕ್ರಮಗಳು ಹಾಗೂ ಸ್ವಯಂ ರಕ್ಷಣಾ ವಿಧಾನಗಳ ಕುರಿತು ಆರೋಗ್ಯ ಶಿಕ್ಷಣ ನೀಡಿದರು.
ಈ ವೇಳೆ ಸಹ ಶಿಕ್ಷಕರಾದ ಶಾಲಿನಿ, ಸುಷ್ಮಾ, ಬಿಂದುಶ್ರೀ, ಸ್ನೇಹಲತಾ, ಶೃತಿ, ರಾಣಿ, ಮಧುಸೂಧನ, ತೇಜಶ್ವಿನಿ ಹಾಗೂ ಇತರರು ಉಪಸ್ಥಿತರಿದ್ದರು.