ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಗಮಂಗಲದ ಪತ್ರಕರ್ತ ಬಿ.ಸಿ.ಮೋಹನ್ ಕುಮಾರ್ (50) ಶುಕ್ರವಾರ ಸಂಜೆ ಸಾವಿಗೀಡಾಗಿದ್ದಾರೆ.
ಮೈಸೂರು- ಬೀದರ್ ಹೆದ್ದಾರಿಯ ನಾಗಮಂಗಲ ಸಮೀಪದ ತೊಳಲಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೋಹನ್ ಕುಮಾರ್ ಸಾವಿಗೀಡಾಗಿದ್ಧಾರೆ.
ನಾಗಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದದ್ದ ಅವರು, ಆಂದೋಲನ, ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ನಾಗಮಂಗಲ ತಾಲೂಕಿನ ಬ್ಯಾಡರಹಳ್ಳಿಯವರಾದ ಅವರು, ಪತ್ನಿ, ಬಂಧು ಬಳಗ ಸೇರಿದಂತೆ ಸ್ನೇಹ ಬಳಗವನ್ನು ಅಗಲಿದ್ದಾರೆ.
ಸಚಿವರ ಸಂತಾಪ
ಪತ್ರಕರ್ತರಾದ ಬಿ.ಸಿ.ಮೋಹನ್ ಕುಮಾರ್ ಸಾವಿಗೆ ಸಚಿವ ಎನ್.ಚಲುವರಾಯಸ್ವಾಮಿ ಸಂತಾಪ ಸೂಚಿಸಿದ್ದಾರೆ. ಮೋಹನ್ ಕುಮಾರ್ ಅವರು ಅತ್ಯಂತ ಕ್ರೀಯಾಶೀಲ ಪತ್ರಕರ್ತರಲ್ಲೊಬ್ಬರಾಗಿದ್ದರು. ತಮ್ಮ ಬರವಣೆಗೆ ಮೂಲಕ ಅನೇಕ ಸಾಮಾಜಿಕ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಬಗೆಹರಿಸುವಲ್ಲಿ ಕಾರಣರಾಗಿದ್ದರು.
ಅವರ ಅಕಾಲಿಕ ಸಾವು ತೀವ್ರ ದುಖ ತಂದಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕೆಯುಡಬ್ಲ್ಯೂಜೆ ಸಂತಾಪ
ಹಿರಿಯ ಪತ್ರಕರ್ತ ಬಿ.ಸಿ.ಮೋಹನಕುಮಾರ್ ಅವರ ನಿಧನಕ್ಕೆ ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಸಂತಾಪ ವ್ಯಕ್ತಪಡಿಸಿದೆ. ಮೋಹನಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.