ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಬಳಿ ಶಿರಾ – ನಂಜನಗೂಡು ಸಂಪರ್ಕಿಸುವ ರಾಜ್ಯ ಹೆದ್ದಾರಿ(ಎಸ್ಎಚ್–84)ಯನ್ನು ಒತ್ತುವರಿ ಮಾಡಿಕೊಂಡು ಸಾರ್ವ್ಜನಿಕರ ಸಂಚಾರಕ್ಕೆ ತೊಂದರೆ ಕೊಡುತ್ತಿರುವುದನ್ನು ಖಂಡಿಸಿ ಹಲ್ಲೇಗೆರೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಗುರುವಾರ ಪ್ರತಿಭಟನೆ ನಡೆಸಿದರು.
ಹಲ್ಲೇಗೆರೆ ಗ್ರಾಮದ ಬಳಿ ಹೆದ್ದಾರಿಗಿಳಿದ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹೆದ್ದಾರಿ- 84 ಹಲ್ಲೇಗೆರೆ ಮೇಲೆ ಹಾದುಹೋಗಿದೆ, ಇಷ್ಟು ದಿನ ವಿಶಾಲವಾಗಿದ್ದ ಕಚ್ಚಾ ರಸ್ತೆಯನ್ನು ಕೆಲವು ಪಟ್ಟಭದ್ರರು ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಯಾರೋ ಒಬ್ಬರ ಹಿತಾಶಕ್ತಿಯಿಂದ ಸಂಚಾರಕ್ಕೆ ಅಡ್ಡಿ ಪಡಿಸುತ್ತಿರುವುದು ಖಂಡನೀಯವಾಗಿದೆ, ಈ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಯಾವ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಹಲ್ಲೇಗೆರೆ ಗ್ರಾಮದ ಬಳಿ ಕೆಸರು ಗದ್ದೆಯಾಗಿರುವ ಕಿರಿದಾದ ರಸ್ತೆಯಲ್ಲಿಯೇ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ, ದಿನನಿತ್ಯದ ಹೊಲ ಗದ್ದೆಗಳಿಗೆ ಹೋಗುವುದಕ್ಕೂ ತೊಂದರೆ ಆಗಿದೆ. ವಯೋವೃದ್ಧರು ಸಹ ಇಲ್ಲಿರುವ ಗುಂಡಿಗಳಲ್ಲಿ ಬೀಳುವಂತಾಗಿದೆ. ಎಲ್ಲರೂ ಈ ರಸ್ತೆಯನ್ನೇ ಅವಲಂಬಿಸಿರುವುದರಿಂದ ದುರಸ್ತಿ ಕಾರ್ಯವನ್ನು ತಕ್ಷಣ ಮುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಿ.ಕೆ.ಪಾಪಯ್ಯ, ಗ್ರಾ.ಪಂ.ಅಧ್ಯಕ್ಷೆ ಎ.ಪಿ.ಸುಮಾ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಕರೀಗೌಡ, ರಾಮಲಿಂಗೇಗೌಡ, ಕೃಷ್ಣ, ದಯಾನಂದ್, ಶ್ರುತಿ, ಕೆ.ಎಂ.ನಾಗರಾಜು, ಗೀತಾ, ಜಯರಾಮೇಗೌಡ, ಮುಖಂಡರಾಧ ಶಶಿಕುಮಾರ್, ಬೋರೇಗೌಡ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಮಹಿಳೆಯರು ಭಾಗವಹಿಸಿದ್ದರು.